ಬಡತನ: ಮಕ್ಕಳನ್ನು ಕೊಂದ ತಾಯಿ
ಲಾಹೋರ್(ಪಿಟಿಐ): ಬಡತನದ ಬೇಗೆ ತಾಳದ ಮಹಿಳೆಯೊಬ್ಬರು ತನ್ನಿಬ್ಬರು ಕಂದಮ್ಮಗಳನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆ ಪಾಕಿಸ್ತಾನದ ಲಾಹೋರ್ನಲ್ಲಿ ಬುಧವಾರ ನಡೆದಿದೆ.
ಬಿಸ್ಮಾ (24) ಎಂಬ ಮಹಿಳೆ ತನ್ನ ಎರಡು ವರ್ಷದ ಮಗ ಫಹಾದ್ನನ್ನು ಸ್ನಾನದ ತೊಟ್ಟಿಯಲ್ಲಿ ಮುಳುಗಿಸಿ, ಮತ್ತೊಂದು ಎಂಟು ತಿಂಗಳ ಪುಟಾಣಿ ಯೂಸಫ್ನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ಪತಿ ಮಾದಕವಸ್ತು ವ್ಯಸನಿಯಾಗಿದ್ದು, ಮಕ್ಕಳ ಪೋಷಣೆ ಹಾಗೂ ಕುಟುಂಬ ನಿರ್ವಹಣೆ ಮಾಡುತ್ತಿರಲಿಲ್ಲ. ತುತ್ತು ಅನ್ನಕ್ಕಾಗಿ ಮಕ್ಕಳು ಬೀದಿಗೆ ಬೀಳುವ ಸ್ಥಿತಿ ಇತ್ತು. ಅಲ್ಲದೇ ಮಕ್ಕಳ ಆರೈಕೆ ಕಷ್ಟವಾದ ಹಿನ್ನೆಲೆಯಲ್ಲಿ ಕೊಲೆ ಮಾಡಿದೆ ಎಂದು ಆರೋಪಿ ತಾಯಿ ಒಪ್ಪಿಕೊಂಡಿದ್ದಾಳೆ. ಈ ಕೃತ್ಯಕ್ಕೆ ಬಡತನ ಕಾರಣ ಎನ್ನಲಾಗಿದ್ದು, ಬಿಸ್ಮಾ ಹಾಗೂ ಆಕೆಯ ಪತಿ ಸುನ್ನಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಶಿಕ್ಷಕಿಯಿಂದ ಬಾಯಿಗೆ ಟೇಪ್
ಲಂಡನ್(ಪಿಟಿಐ): ತರಗತಿಯಲ್ಲಿ ತುಂಟಾಟ ಮಾಡುವ ಮಕ್ಕಳನ್ನು ನಿಯಂತ್ರಿಸಲು ಶಿಕ್ಷಕಿಯೊಬ್ಬರು ಸೆಲ್ಲೊ ಟೇಪ್ ಅಂಟಿಸಿದ ಘಟನೆ ಯೊಂದು ಲಂಡನ್ನಲ್ಲಿ ಇತ್ತೀಚೆಗೆ ನಡೆದಿದೆ. ಇದಕ್ಕಾಗಿ ಶಿಕ್ಷಕಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ವಿಲ್ಲಿಟನ್ ಸಾಮರ್ಸೆಟ್ ಎಂಬಲ್ಲಿನ ಡೆನೆಸ್ ಫೀಲ್ಡ್ ಚರ್ಚ್ ಆಫ್ ಇಂಗ್ಲೆಂಡ್ ಶಾಲೆಯಲ್ಲಿ 10 ಹಾಗೂ 11 ವರ್ಷದ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿದ ಈ ಶಿಕ್ಷಕಿ ಮಕ್ಕಳ ಬಾಯಿಗೆ ಟೇಪ್ ಅಂಟಿಸಿದ್ದರು.
ಸ್ಪೇನ್ ಭಾಷೆ ಹಾಗೂ ಕಲಾ ಶಿಕ್ಷಕಿ ಪ್ರೆಸಿಲ್ಲಾ ಡಾವೊ ಈ ವಿಚಿತ್ರ ಶಿಕ್ಷೆ ನೀಡಿದಾಕೆ. ಕೆಲ ವಿದ್ಯಾರ್ಥಿಗಳಿಗೆ ತರಗತಿ ನಡೆಯುತ್ತಿದ್ದ ವೇಳೆ ಒಂದಕ್ಕಿಂತ ಹೆಚ್ಚು ಟೇಪ್ ಅಂಟಿಸಿದ್ದರು. ಶಿಕ್ಷಕಿಯ ಹುಚ್ಚಾಟವನ್ನು ವಿದ್ಯಾರ್ಥಿಗಳು ಪೋಷಕರಿಗೆ ತಿಳಿಸಿದರು. ಶಿಕ್ಷಕಿಯನ್ನು ಸೇವೆಯಿಂದ ಅಮಾನತು ಮಾಡಲಾಯಿತು.
ಲಾರಿ ಖರೀದಿಸಿದ ಬಾಲಕ
ಲಂಡನ್ (ಪಿಟಿಐ): ಐದು ವರ್ಷದ ಬಾಲಕ ಅಮ್ಮನ ಕ್ರೆಡಿಟ್ ಕಾರ್ಡ್ ಬಳಸಿ ಆನ್ಲೈನ್ನಲ್ಲಿ ₨ 3.50 ಲಕ್ಷ ಬೆಲೆಬಾಳುವ ಕಸ ಸಾಗಿಸುವ ಲಾರಿ ಖರೀದಿ ಮಾಡಿರುವ ಆಶ್ಚರ್ಯಕರ ಘಟನೆ ಇಲ್ಲಿ ನಡೆದಿದೆ.
ಕೇಂಬ್ರಿಡ್ಜ್ ಶೈರ್ನ ವಿಲಿಯಮ್ ಬೇಟ್ಮನ್ ಎಂಬ ಬಾಲಕ ಅಮ್ಮನ ಕಂಪ್ಯೂಟರ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸಿ ಬಿಳಿ ಬಣ್ಣದ ಲಾರಿಯನ್ನು ಇ–ಹರಾಜಿನಲ್ಲಿ ಖರೀದಿಸಿದ್ದಾನೆ.
‘ಕಸದ ಲಾರಿಯ ಗೀಳು ಬೆಳೆಸಿಕೊಂಡಿದ್ದ ಮಗ, ಲಾರಿಗಳು ಮರುಬಳಕೆ ವಸ್ತುಗಳನ್ನು ಪಡೆದುಕೊಳ್ಳಲು ಬಂದಾಗ ಅವರಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದ’ ಎಂದು ಬಾಲಕನ ತಾಯಿ ಹೇಳಿದ್ದಾರೆ.
ಸೇನಾ ನೆರವು ಕಡಿತ: ಅಮೆರಿಕ ಚಿಂತನೆ
ವಾಷಿಂಗ್ಟನ್ (ಪಿಟಿಐ): ಪ್ರತಿ ವರ್ಷವು ಭಯೋತ್ಪಾದನೆ ನಿಗ್ರಹಕ್ಕಾಗಿ ಪಾಕಿಸ್ತಾನಕ್ಕೆ ನೀಡುತ್ತಿದ್ದ 28 ಕೋಟಿ ಡಾಲರ್ (₨ 1680 ಕೋಟಿ) ಸೇನಾ ನೆರವನ್ನು ಕಡಿತಗೊಳಿಸಲು ಅಮೆರಿಕ ಚಿಂತನೆ ನಡೆಸಿದೆ.
ಭಯೋತ್ಪಾದನೆ ನಿಗ್ರಹಕ್ಕೆ ನೀಡಿದ ಹಣಕಾಸು ನೆರವನ್ನು ಪಾಕ್ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಭಾರತ ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಒಬಾಮ ಆಡಳಿತ ಈ ನಿರ್ಧಾರ ತೆಳೆದಿದೆ. ಅಲ್ಲದೇ ಭಾರತ ಜತೆ ಬಾಂಧವ್ಯ ಸುಧಾರಣೆಗೆ ಒಲವು ವ್ಯಕ್ತಪಡಿಸಿದೆ. ಮುಂದಿನ ಹಣಕಾಸು ವರ್ಷ ನೀಡಬೇಕಿದ್ದ 446 ಡಾಲರ್ (₨ 2676 ಕೋಟಿ) ಹಣಕಾಸು ನೆರವನ್ನು ತಡೆ ಹಿಡಿದಿದೆ. ಕಳೆದ ವರ್ಷ (₨4218 ಕೋಟಿ) ನೀಡಿತ್ತು.
ವನ್ಯಜೀವಿ ರಕ್ಷಣೆಗೆ ಮೊದಲ ಫತ್ವಾ
ಜಕಾರ್ತ (ಎಎಫ್ಪಿ): ದೇಶದಲ್ಲಿರುವ ಅಳಿವಿನ ಅಂಚಿನಲ್ಲಿರುವ ವನ್ಯಜೀವಿಗಳ ಬೇಟೆ ಮತ್ತು ವ್ಯಾಪಾರದ ವಿರುದ್ಧ ಇಂಡೊನೇಷ್ಯಾದ ಮುಸ್ಲಿಂ ಧಾರ್ಮಿಕ ಮುಖಂಡರು ಫತ್ವಾ ಹೊರಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ವಿಶ್ವದಲ್ಲಿ ಇದೇ ಮೊದಲ ಬಾರಿಗೆ ವನ್ಯಜೀವಿಗಳ ಉಳಿವಿಗಾಗಿ ಫತ್ವಾ ಹೊರಡಿಸಲಾಗಿದೆ ಎಂದು ಡಬ್ಲ್ಯು ಡಬ್ಲ್ಯುಎಫ್ನ (ವಿಶ್ವ ವನ್ಯಜೀವಿ ನಿಧಿ) ಇಂಡೊನೇಷ್ಯಾ ಸಂವಹನ ನಿರ್ದೇಶಕರಾದ ನ್ಯೋಮನ್ ಈಸ್ವರ ಯೋಗ ಹೇಳಿದ್ದಾರೆ.
ಇದರಿಂದ ಅಳಿವಿನ ಅಂಚಿನಲ್ಲಿರುವ ಹುಲಿಗಳು ಮತ್ತು ಘೇಂಡಾಮೃಗಗಳ ರಕ್ಷಣೆ ಆಗುತ್ತದೆ ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಧಾರ್ಮಿಕ ಸಮರ್ಥನೆ ಅಥವಾ ಕಾನೂನಿನ ಬೆಂಬಲವಿಲ್ಲದೆ ಈ ರೀತಿ ವನ್ಯ ಜೀವಿಗಳನ್ನು ನಾಶ ಮಾಡುವುದಕ್ಕೆ ಇಸ್ಲಾಂನಲ್ಲಿ ನಿಷೇಧವಿದೆ.ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಕಾನೂನು ಬಾಹಿರ ಬೇಟೆ ಮತ್ತು ವ್ಯಾಪಾರ ಸರಿಯಲ್ಲ’ ಎಂದು ಧಾರ್ಮಿಕ ಮುಖಂಡ ಅಸ್ರೌನ್ ನಿಯಾಮ್ ಷೋಲೆಹ್ ತಿಳಿಸಿದ್ದಾರೆ.
ಈ ಕುರಿತು ಮಾರ್ಚ್ 12ಕ್ಕೆ ಅರಣ್ಯ ಇಲಾಖೆ ಸಚಿವರು ಮತ್ತು ಇಸ್ಲಾಂ ಧಾರ್ಮಿಕ ಮಂಡಳಿ ಜಂಟಿ ಹೇಳಿಕೆ ನೀಡಲಿರುವುದಾಗಿ ಅನಾಮಿಕರಾಗಿ ಉಳಿಯಲು ಬಯಸಿದ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.