ADVERTISEMENT

ಸಂಕ್ಷಿಪ್ತ ಸುದ್ದಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST

ಮೊಬೈಲ್: ಕಡಿಮೆ ಅವಧಿಗೆ ಚಾರ್ಜ್ ಮಾಡಿ
ಲಂಡನ್ (ಪಿಟಿಐ): ನಿಮ್ಮ ಮೊಬೈಲಿನ ಬ್ಯಾಟರಿಯನ್ನು ದೀರ್ಘಕಾಲ ಉಳಿಸಬೇಕೇ? ಹಾಗಿದ್ದರೆ ನಿಮ್ಮ ಮೊಬೈಲನ್ನು ಶೇಕಡಾ 100ರಷ್ಟು ಚಾರ್ಜ್ ಮಾಡದಿರಿ.

ಮೊಬೈಲ್‌ಗಳನ್ನು ನಿರಂತರವಾಗಿ ಚಾರ್ಜ್ ಮಾಡುವುದು ಅಥವಾ ಬ್ಯಾಟರಿ ಸಂಪೂರ್ಣವಾಗಿ ಖಾಲಿಯಾಗುವವರೆಗೂ ಬಳಸುವುದು ಬ್ಯಾಟರಿ ಬಾಳಿಕೆಗೆ ತೊಂದರೆ ಉಂಟು ಮಾಡುತ್ತದೆ. ಬದಲಾಗಿ ಕೇವಲ ಶೇ 50ರಷ್ಟು ಚಾರ್ಜ್ ಮಾಡುವುದು ಬ್ಯಾಟರಿ ಬಾಳಿಕೆಗೆ ಉತ್ತಮ ಎನ್ನುತ್ತಾರೆ ತಂತ್ರಜ್ಞಾನ ತಜ್ಞ ಎರಿಕ್ ಲೈಮರ್.

ಇಂಡೊನೇಷ್ಯಾ: ಭೂಕಂಪನಕ್ಕೆ 5 ಬಲಿ
ಲಾಂಪ್ಹನ್ (ಎಎಫ್‌ಪಿ): ಇಂಡೊನೇಷ್ಯಾದ ವಾಯವ್ಯ ಪ್ರಾಂತ್ಯ ಯಾಚ್‌ನಲ್ಲಿ ಮಂಗಳವಾರ ಭೂಕಂಪನ ಸಂಭವಿಸಿದ್ದು, ಐದು ಮಂದಿ ಮೃತಪಟ್ಟಿದ್ದಾರೆ. ಕಂಪನದ ತೀವ್ರತೆ 6.1 ಎಂದು ದಾಖಲಾಗಿದೆ.   ಕನಿಷ್ಠ 50 ಮಂದಿ ಗಾಯಗೊಂಡಿದ್ದಾರೆ.

ಶ್ರೀಲಂಕಾ: ಪತ್ರಿಕೆ ಮುಟ್ಟುಗೋಲು 
ಕೊಲಂಬೊ (ಪಿಟಿಐ): ಟೈಮ್ ಅಂತರರಾಷ್ಟ್ರೀಯ ನಿಯತಕಾಲಿಕೆಯ ಇತ್ತೀಚಿನ  ಪ್ರತಿಗಳನ್ನು ಶ್ರೀಲಂಕಾ ಮುಟ್ಟುಗೋಲು ಹಾಕಿಕೊಂಡಿದೆ.  ಮ್ಯಾನ್ಮಾರ್‌ನ ದಾಳಿಯ ಕುರಿತ ನಿಯತಕಾಲಿಕೆಯ ಮುಖಪುಟ ಲೇಖನವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂಬ ಹಿನ್ನೆಲೆಯಲ್ಲಿ ನಿಯತಕಾಲಿಕೆಯ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 

`ನಾವು ಈ ಪ್ರತಿಗಳು ದೇಶದಲ್ಲಿ ಹಂಚಿಕೆಯಾಗಲು ಬಿಡುವುದಿಲ್ಲ, ಈ ಪ್ರತಿಗಳಿಂದ ದೇಶದಲ್ಲಿನ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ' ಎಂದು ಸುಂಕ ಇಲಾಖೆಯ ವಕ್ತಾರ ಲೆಸ್ಲಿ ಗಮಿನಿ ಹೇಳಿದ್ದಾರೆ.

ರಷ್ಯಾ ಹೆಲಿಕಾಪ್ಟರ್ ಅಪಘಾತ:  19 ಸಾವು
ಮಾಸ್ಕೊ(ಎಎಫ್‌ಪಿ): ರಷ್ಯಾದ ಉತ್ತರ ವಲಯದ ಯಕುಟಿಅನಲ್ಲಿ ಎಂಐ-8 ಹೆಲಿಕಾಪ್ಟರ್ ಮಂಗಳವಾರ  ಅಪಘಾತಕ್ಕೀಡಾಗಿದ್ದು, 19 ಮಂದಿ ಸಾವನ್ನಪ್ಪಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಒಟ್ಟು 25 ಮಂದಿ ಇದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.