ನ್ಯೂಯಾರ್ಕ್ (ಪಿಟಿಐ): ಸಾಮಾಜಿಕ ತಾಣಗಳ ಅನಗತ್ಯ ಸಂದೇಶಗಳು, ಮಾಹಿತಿಗಳು ಹಾಗೂ ಮಿತಿಮೀರಿದ ಪೋಸ್ಟ್ಗಳಿಂದಾಗಿ ಅರ್ಧಕ್ಕೂ ಹೆಚ್ಚು ಅಂತರ್ಜಾಲ ಬಳಕೆದಾರರಲ್ಲಿ ಸಾಮಾಜಿಕ ತಾಣಗಳ ಬಗ್ಗೆ ಅಸಹನೆ ಉಂಟಾಗಿದ್ದು, ಈ ತಾಣಗಳಿಂದ ತಾತ್ಕಾಲಿಕ ಬಿಡುವು ಹೊಂದಲು ಬಯಸುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.
ಮೈಲೈಫ್ ಡಾಟ್ ಕಾಂ ಅಂತರ್ಜಾಲ ಸಂಸ್ಥೆ ಈ ಕುರಿತು ನಡೆಸಿರುವ ಅಧ್ಯಯನವು, ಹೆಚ್ಚುತ್ತಿರುವ ಸಾಮಾಜಿಕ ತಾಣಗಳು ಮತ್ತು ಇಮೇಲ್ ಖಾತೆಗಳು ಅಂತರ್ಜಾಲ ಬಳಕೆದಾರರಲ್ಲಿ ಅಸಹನೆ ಮೂಡಿಸಿವೆ ಎಂಬ ಅಂಶವನ್ನು ಹೊರಹಾಕಿದೆ.
ಅನಗತ್ಯ ಮಾಹಿತಿಗಳ ಮಹಾಪೂರ ಹಾಗೂ ಸಮಯದ ಅಭಾವವೇ ಸಾಮಾಜಿಕ ತಾಣಗಳ ಬಗ್ಗೆ ಅಂತರ್ಜಾಲ ಬಳಕೆದಾರರಲ್ಲಿ ಅಸಹನೆ ಮೂಡಲು ಪ್ರಮುಖ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ.
ಅಧ್ಯಯನಕ್ಕಾಗಿ 18 ವರ್ಷದ ಎರಡು ಸಾವಿರಕ್ಕೂ ಹೆಚ್ಚು ಯುವಜನ ಹಾಗೂ ವಯಸ್ಕರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ ಶೇ 60 ಮಂದಿ ಅನಗತ್ಯ ಸಂದೇಶಗಳು ಮತ್ತು ಮಾಹಿತಿಗಳಿಂದಾಗಿ ತಮ್ಮ ಕೆಲವು ಪ್ರಮುಖ ಕಾರ್ಯಕ್ರಮಗಳಿಗೆ ಹಾಜರಾಗದೇ ಇದ್ದುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅಧ್ಯಯನ ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.