ADVERTISEMENT

ಹೊಸಕೋಟೆ: ಬಿಗ್‌ ಟ್ರಂಕ್‌ ಬಸ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 19:58 IST
Last Updated 5 ಮಾರ್ಚ್ 2014, 19:58 IST
ಹೊಸಕೋಟೆಯಲ್ಲಿ ನೂತನ ಬಿಎಂಟಿಸಿ ಬಸ್ ಸಂಚಾರಕ್ಕೆ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯಿಲಿ ಬುಧವಾರ ಚಾಲನೆ ನೀಡಿದರು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ಎನ್.ನಾಗರಾಜು, ವಿಧಾನಸಭೆಯ ಉಪಸಭಾಪತಿ ಎನ್.ಎಚ್.ಶಿವಶಂಕರ ರೆಡ್ಡಿ ಮತ್ತಿತರರು ಚಿತ್ರದಲ್ಲಿದ್ದಾರೆ
ಹೊಸಕೋಟೆಯಲ್ಲಿ ನೂತನ ಬಿಎಂಟಿಸಿ ಬಸ್ ಸಂಚಾರಕ್ಕೆ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯಿಲಿ ಬುಧವಾರ ಚಾಲನೆ ನೀಡಿದರು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ಎನ್.ನಾಗರಾಜು, ವಿಧಾನಸಭೆಯ ಉಪಸಭಾಪತಿ ಎನ್.ಎಚ್.ಶಿವಶಂಕರ ರೆಡ್ಡಿ ಮತ್ತಿತರರು ಚಿತ್ರದಲ್ಲಿದ್ದಾರೆ   

ಹೊಸಕೋಟೆ: ‘ಪಟ್ಟಣದಲ್ಲಿ ಸೂಕ್ತ ಜಾಗ ನೀಡಿದರೆ ಸಾರಿಗೆ ಇಲಾಖೆ ವತಿಯಿಂದ ಬಸ್ ನಿಲ್ದಾಣ ನಿರ್ಮಿಸಲಾಗುವುದು’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು.

ಹೊಸಕೋಟೆಯಲ್ಲಿ ಬುಧವಾರ ನಡೆದ ಬಿಗ್‌ ಟ್ರಂಕ್‌ ಬಸ್‌ ಹಾಗೂ ಫೀಡರ್‌ ಬಸ್‌ ಸೇವೆಗಳ ಉದ್ಘಾ­ಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಗ್ರಾಮಾಂತರ ಪ್ರದೇಶದ ಜನರಿಗೆ ಹೆಚ್ಚು ಸೌಲಭ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ನೂತನ ಬಸ್ ಗಳಲ್ಲಿ 31 ಮಿಡಿ ಬಸ್ ಗಳಾಗಿದ್ದು ಅವು ತಾಲ್ಲೂಕಿನ ಐದು ಮಾರ್ಗಗಳಲ್ಲಿ 81 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲಿವೆ. 20 ಬಸ್ ಗಳು (ಬಿಗ್ ಟ್ರಂಕ್) ಪ್ರತಿ 10  ನಿಮಿಷಕ್ಕೆ ಒಂದರಂತೆ ಎರಡು ಮಾರ್ಗಗಳಲ್ಲಿ ಪಟ್ಟಣದಿಂದ ನಗರಕ್ಕೆ ಸಂಪರ್ಕ ಕಲ್ಪಿಸಲಿವೆ’ ಎಂದರು.

‘ನಗರಕ್ಕೆ ಸಂಪರ್ಕ ಕಲ್ಪಿಸಲು 12 ಕಾರಿಡಾರ್‌ಗಳು ಇವೆ.  ಹೊಸಕೋಟೆ ಸೇರಿದಂತೆ ಈಗಾಗಲೇ ಮೂರು ಕಾರಿಡಾರ್ ಗಳಲ್ಲಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಒಂಬತ್ತು ಕಾರಿಡಾರ್ ಗಳಲ್ಲಿ ಆದಷ್ಟು ಶೀಘ್ರದಲ್ಲಿ ಸೌಲಭ್ಯ ಕಲ್ಪಿಸಲಾಗುವುದು’ ಎಂದರು.
ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.ಇದಕ್ಕೂ ಮುಂಚೆ ಪಟ್ಟಣದಲ್ಲಿ ₨40 ಕೋಟಿ ವೆಚ್ಚದ ಒಳಚರಂಡಿ ಯೋಜನೆಗೆ ಮೊಯಿಲಿ ಚಾಲನೆ ನೀಡಿದರು.

‘ದೇಶದಲ್ಲೇ ಪ್ರಥಮವಾಗಿ ಹೊಸಕೋಟೆಯನ್ನು ಉಪನಗರವನ್ನಾಗಿ ಮಾಡಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ₨110 ಕೋಟಿ ಮಂಜೂರು ಮಾಡಿದೆ’ ಎಂದು ಹೇಳಿದರು. ಶಾಸಕ ಎನ್.ನಾಗರಾಜು ಮಾತನಾಡಿ, ‘ಹೊಸಕೋಟೆ ತಾಲ್ಲೂಕಿನಲ್ಲಿ ₨1,000 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.