ಹ್ಯೂಸ್ಟನ್: ಹಾಲು ಕುಡಿಯದಿರುವ ಕಾರಣಕ್ಕೆ ಅಪ್ಪನಿಂದ ಶಿಕ್ಷೆ ಅನುಭವಿಸಿದ್ದ ಮೂರು ವರ್ಷದ ಭಾರತೀಯ ಸಂಜಾತ ಬಾಲಕಿಯೊಬ್ಬಳು ಕಾಣೆಯಾಗಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಬುಧವಾರ ಬಾಲಕಿಯ ಮನೆಗೆ ಭೇಟಿ ನೀಡಿ ಆಕೆಯ ಅಪ್ಪನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ವಿಸ್ಲೆ ಮ್ಯಾಥ್ಯು ಎಂಬ ವ್ಯಕ್ತಿ ಎರಡು ವರ್ಷಗಳ ಹಿಂದೆ ಭಾರತದ ಅನಾಥಾಶ್ರಮದಿಂದ ಹೆಣ್ಣುಮಗುವನ್ನು ದತ್ತು ಪಡೆದುಕೊಂಡಿದ್ದರು. ಮಗಳು ಶಿರಿನ್ ಹಾಲು ಕುಡಿದಿಲ್ಲ ಎಂಬ ಕಾರಣಕ್ಕೆ ಸಿಟ್ಟಾದ ಅವರು ಕಳೆದ ಶುಕ್ರವಾರ ರಾತ್ರಿ ಮರದಡಿಯಲ್ಲಿ ಕಳೆಯುವಂತೆ ಆಕೆಗೆ ಶಿಕ್ಷೆ ವಿಧಿಸಿದ್ದರು. ಶನಿವಾರ ಬೆಳಗಿನ ಜಾವ 3 ಗಂಟೆಯ ವೇಳೆಗೆ ಮಗಳು ಕಾಣೆಯಾಗಿರುವುದು ಗೊತ್ತಾಗಿದೆ. ಮಗುವಿಗೆ ಮಾನಸಿಕ ಸಮಸ್ಯೆ ಇತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಶಿರಿನ್ ಮನೆಯಿಂದ ಹೊರ ಹೋದ ಹದಿನೈದು ನಿಮಿಷಗಳಲ್ಲೇ ಕಾಣೆಯಾಗಿದ್ದಾಳೆ. ಆದರೆ, ಅದಾಗಿ ಕೆಲವು ಗಂಟೆಗಳಾದರೂ ಪೊಲೀಸರಿಗೆ ದೂರು ನೀಡಿರಲಿಲ್ಲ. ಇದು ಪೊಲೀಸರಿಗೆ ಅನುಮಾನ ಹುಟ್ಟುಹಾಕಿತ್ತು. ವಿಚಾರಣೆ ವೇಳೆ ಆರಂಭದಲ್ಲಿ ಮಗುವನ್ನು ಯಾರೋ ಅಪಹರಣ ಮಾಡಿರಬಹುದು ಎಂದು ಮ್ಯಾಥ್ಯು ಹೇಳಿದ್ದರು. ಆದರೆ ವಿಚಾರಣೆ ತೀವ್ರಗೊಳಿಸಿದಾಗ ಮಗುವಿಗೆ ಶಿಕ್ಷೆ ನೀಡಿರುವ ಬಗ್ಗೆ ವಿವರಿಸಿದ್ದಾರೆ. ಅಷ್ಟೇ ಅಲ್ಲದೇ ಆ ಪ್ರದೇಶದಲ್ಲಿ ಗುಳ್ಳೆನರಿಗಳು ಹೆಚ್ಚಾಗಿ ಓಡಾಟ ನಡೆಸುತ್ತಿರುವ ವಿಷಯ ಕೂಡ ತಮಗೆ ತಿಳಿದಿತ್ತು. ಆದರೂ ಮಗುವನ್ನು ಹೊರಕ್ಕೆ ನಿಲ್ಲಿಸಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ರಿಚರ್ಡ್ಸನ್ ಪೊಲೀಸರು ವಿಸ್ಲೆಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ತನಿಖೆ ಮುಂದುವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.