ವಾಷಿಂಗ್ಟನ್ (ಪಿಟಿಐ): ‘ಆರು ವರ್ಷಗಳ ಹಿಂದೆ ಕಾಬೂಲ್ನಲ್ಲಿ ಭಾರತೀಯ ರಾಯಭಾರ ಕಚೇರಿ ಮೇಲೆ ನಡೆದ ಘೋರ ದಾಳಿಗೆ ಪಾಕಿಸ್ತಾನದ ಐಎಸ್ಐ ಚಿತಾವಣೆ ಇತ್ತು’ ಎಂದು ಹೊಸ ಪುಸ್ತಕವೊಂದು ಹೇಳಿದೆ.
2008ರ ಜುಲೈ7ರಂದು ನಡೆದ ಈ ದಾಳಿಯಲ್ಲಿ ಭಾರತದ ಇಬ್ಬರು ಅಧಿಕಾರಿಗಳು ಸೇರಿದಂತೆ 58 ಮಂದಿ ಮೃತಪಟ್ಟಿದ್ದರು. ಅಲ್ಲದೇ 140ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
‘ಈ ದಾಳಿ ಹಿಂದೆ ಐಎಸ್ಐ ಹಿರಿಯ ಅಧಿಕಾರಿಗಳ ಕುಮ್ಮಕ್ಕು ಇತ್ತು’ ಎಂದು ಪತ್ರಕರ್ತೆ ಕರ್ಲೊಟ್ಟಾ ಗಾಲ್್ ಅವರ ‘ದಿ ರಾಂಗ್್ ಎನಿಮಿ: ಅಮೆರಿಕ ಇನ್ ಆಫ್ಘಾನಿಸ್ತಾನ್್ 2001–2004’ ಕೃತಿಯಲ್ಲಿ ಹೇಳಲಾಗಿದೆ.
‘ಈ ಬಗ್ಗೆ ಮುಂಚಿತವಾಗಿಯೇ ಗುಪ್ತಚರ ಮಾಹಿತಿ ಬಂದಿದ್ದರೂ ಆಗಿನ ಬುಷ್ ಆಡಳಿತಕ್ಕೆ ಈ ಘೋರ ದಾಳಿ ತಪ್ಪಿಸಲು ಸಾಧ್ಯವಾಗಲಿಲ್ಲ’ ಎಂದೂ ಗಾಲ್ ಇಲ್ಲಿ ಹೇಳುತ್ತಾರೆ.
‘ಸ್ಫೋಟದಲ್ಲಿ ನಜ್ಜುಗುಜ್ಜಾದ ಕಾರಿನಲ್ಲಿ ತನಿಖಾಧಿಕಾರಿಗಳಿಗೆ ದಾಳಿಕೋರನ ಮೊಬೈಲ್ ಫೋನ್ ಸಿಕ್ಕಿತ್ತು. ಈತನಿಗೆ ನೆರವು ನೀಡಿದ ವ್ಯಕ್ತಿಯನ್ನು ಅಧಿಕಾರಿಗಳು ಕಾಬೂಲ್ನಲ್ಲಿ ಪತ್ತೆಮಾಡಿದರು. ಆಫ್ಘನ್ ಮೂಲದ ಈ ವ್ಯಕ್ತಿ ಐಎಸ್ಐ ಉನ್ನತಾಧಿಕಾರಿಯೊಬ್ಬರೊಂದಿಗೆ ನೇರವಾಗಿ ದೂರವಾಣಿ ಸಂಪರ್ಕದಲ್ಲಿದ್ದ’ ಎಂಬ ವಿವರಗಳೂ ಈ ಪುಸ್ತಕದಲ್ಲಿವೆ.
ಕಾಬೂಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೆ ನಡೆದ ದಾಳಿಯಲ್ಲಿ ತನ್ನ ಕೈವಾಡ ಇಲ್ಲ ಎಂದು ಪಾಕಿಸ್ತಾನ ಪದೇ ಪದೇ ಹೇಳುತ್ತಲೇ ಬಂದಿದೆ. ಆದರೆ ಭಾರತ ಮತ್ತು ಆಫ್ಘನ್ ಸರ್ಕಾರಗಳು ‘ದಾಳಿಯ ಹಿಂದೆ ಐಎಸ್ಐ ಕೈವಾಡ’ ಇದೆ ಎಂದು ಆರೋಪಿಸಿವೆ. ಅಮೆರಿಕದ ಪ್ರಮುಖ ಪತ್ರಿಕೆಗಳು ಕೂಡ ಇದನ್ನು ಅನುಮೋದಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.