ಬಾಮಾಕೊ (ಮಾಲಿ): ವಾಹನವೊಂದರಲ್ಲಿ ಬಾಂಬ್ ಸ್ಫೋಟಿಸಿದ ಪರಿಣಾಮ ವಿಶ್ವಸಂಸ್ಥೆಯ ಮೂವರು ಶಾಂತಿಪಾಲಕರು ಮೃತಪಟ್ಟ ಘಟನೆ ಮಾಲಿಯ ಟಿಂಬಕ್ಟು ಪ್ರಾಂತ್ಯದಲ್ಲಿ ನಡೆದಿದೆ. ಈ ಮೂವರು ಮೂಲತಃ ಐವರಿ ಕೋಸ್ಟ್ನ ನಿವಾಸಿಗಳು.
‘ಬುಧವಾರ ಡೌಯೆಂಟ್ಜಾ ಮತ್ತು ಟಿಂಬಕ್ಟುನಲ್ಲಿ ಭದ್ರತಾ ಪಡೆಯು ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ವಾಹನವೊಂದರಲ್ಲಿ ಬಾಂಬ್ ಸ್ಫೋಟಿಸಿದೆ. ಇದೇ ವೇಳೆಬಂದೂಕುಧಾರಿಗಳು ಕೂಡ ಗುಂಡು ಚಲಾಯಿಸಿದ್ದಾರೆ. ಈ ದಾಳಿಯಲ್ಲಿ ಮೂರು ಮಂದಿ ಮೃತಪಟ್ಟಿದ್ದು,ಆರು ಜನರಿಗೆ ಗಾಯಗಳಾಗಿವೆ’ ಎಂದು ಮಿನುಸ್ಮಾ ಮಿಷನ್ ಹೇಳಿದೆ.
‘ದಾಳಿಕೋರರು ತಕ್ಷಣವೇ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ಮುಂದುವರಿದಿದೆ’ ಎಂದು ಮಿನುಸ್ಮಾ ಮಿಷನ್ ಮಾಹಿತಿ ನೀಡಿದೆ.
ವಿಶ್ವಸಂಸ್ಥೆಯ ವಿಶೇಷ ರಾಯಭಾರಿ, ಮಿಷನ್ ಮುಖ್ಯಸ್ಥ ಮಹಾಮತ್ ಸಲೇಹ್ ಅನ್ನದಿಫ್, ದಾಳಿಗೆ ಖಂಡನೆ ವ್ಯಕ್ತಪಡಿಸಿದ್ದಾರೆ.
‘ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಈ ದಾಳಿಯನ್ನು ಖಂಡಿಸಿದ್ದಾರೆ. ವಿಶ್ವಸಂಸ್ಥೆಯ ಶಾಂತಿಪಾಲಕರ ಮೇಲೆ ನಡೆಸಿರುವ ದಾಳಿ ಯುದ್ಧ ಅಪರಾಧವಾಗಿದೆ ಎಂದು ಅವರು ಹೇಳಿದ್ದಾರೆ’ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜರಿಕ್ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.