ಜಕಾರ್ತ: ರೋಹಿಂಗ್ಯಾ ಮುಸ್ಲಿಮರ ಹತ್ಯೆ ಅಥವಾ ಅವರನ್ನು ದೇಶದಿಂದ ಹೊರಹಾಕುವುದರಿಂದ ಮ್ಯಾನ್ಮಾರ್ ಮತ್ತು ಅದರ ಗಡಿಯಾಚೆ ಧಾರ್ಮಿಕ ಸಂಘರ್ಷ ಉಂಟಾಗಬಹುದು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತ ಝೈದ್ ಅಲ್ ಹುಸೇನ್ ಎಚ್ಚರಿಸಿದ್ದಾರೆ.
ಮ್ಯಾನ್ಮಾರ್ನ ರಖೈನ್ನಲ್ಲಿ ರೋಹಿಂಗ್ಯಾ ಮುಸ್ಲಿಮರ ಸಾಮೂಹಿಕ ಅಂತ್ಯಸಂಸ್ಕಾರ ಮಾಡಿದ ಕುರಿತು ಕಳೆದ ವಾರ ಪ್ರಕಟವಾದ ವರದಿ ಉಲ್ಲೇಖಿಸಿ ಅವರು ಮಾತನಾಡಿದ್ದಾರೆ. ‘ಅಲ್ಲಿನ ಸೇನೆ ಒಂದು ಜನಾಂಗವನ್ನೇ ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿದೆ. ಪ್ರಾದೇಶಿಕ ಭದ್ರತೆ ವಿಷಯದಲ್ಲಿ ಮ್ಯಾನ್ಮಾರ್ ಅತ್ಯಂತ ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ’ ಎಂದು ಅವರು ತಿಳಿಸಿದ್ದಾರೆ.
ಕಳೆದ ಆಗಸ್ಟ್ನಿಂದ ಸುಮಾರು 7 ಲಕ್ಷ ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದಾರೆ.
ರೋಹಿಂಗ್ಯಾ ಮುಸ್ಲಿಮರ ಸಾಮೂಹಿಕ ಅಂತ್ಯಸಂಸ್ಕಾರ ಕುರಿತ ವರದಿಯನ್ನು ಮ್ಯಾನ್ಮಾರ್ ಅಲ್ಲಗಳೆದಿದೆ. ಅಲ್ಲದೆ, ಮಾನವ ಹಕ್ಕುಗಳ ಉಲ್ಲಂಘನೆಯನ್ನೂ ಅದು ನಿರಾಕರಿಸಿದೆ. ಆದರೆ, ಬಿಕ್ಕಟ್ಟು ಉಲ್ಬಣಿಸಿರುವ ಪ್ರದೇಶಗಳು ಮತ್ತು ರೋಹಿಂಗ್ಯಾ ನಿರಾಶ್ರಿತರ ಹತ್ಯೆ ಕುರಿತು ಸ್ವತಂತ್ರ ಅಧ್ಯಯನ ನಡೆಸಲು ವಿಶ್ವಸಂಸ್ಥೆಯ ಪ್ರತಿನಿಧಿಗಳು ಮತ್ತು ವರದಿಗಾರರ ಪ್ರವೇಶಕ್ಕೆ ಮ್ಯಾನ್ಮಾರ್ ಅನುಮತಿ ನೀಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.