ನವದೆಹಲಿ: ‘ನಾನು ಓಡಿ ಬರಲೇಬೇಕಿತ್ತು. ಇಲ್ಲದಿದ್ದರೆ ತಾಲಿಬಾನ್ ನನ್ನನ್ನು ಕೊಂದೇ ಬಿಡುತ್ತಿತ್ತು. ಇಲ್ಲಿಗೆ ಎಲ್ಲವೂ ಮುಗಿಯಿತು’ ಹೀಗೆಂದು ಅಫ್ಗಾನಿಸ್ತಾನದ ಗುಪ್ತಚರ ಇಲಾಖೆ ಅಧಿಕಾರಿ ಆಸಿಫ್ ಕಣ್ಣೀರಿಡುತ್ತಾ ಅಸ್ಪಷ್ಟ ಹಿಂದಿಯಲ್ಲಿ ಹೇಳಿದರು.
ಭಾನುವಾರ ಕಾಬೂಲ್ನಿಂದ ಬಂದ ಕಡೆಯ ವಿಮಾನ ಏರಿ ಪ್ರಾಣ ಉಳಿಸಿಕೊಳ್ಳಲು ಭಾರತಕ್ಕೆ ಬಂದ ಅಫ್ಗಾನಿಸ್ತಾನ ಪ್ರಜೆಗಳಲ್ಲಿ ಆಸಿಫ್ ಕೂಡಾ ಒಬ್ಬರು.
ಅವರ ದೇಶವಾಸಿ ಒಬ್ಬರು ಆಸಿಫ್ಗೆ ದೆಹಲಿಯ ಲಾಜ್ಪತ್ ನಗರದಲ್ಲಿ ದಿನಕ್ಕೆ ₹500 ಬಾಡಿಗೆಗೆ ಕೊಠಡಿಯೊಂದನ್ನು ಕೊಡಿಸಿದ್ದಾರೆ. ‘ನಾನು ₹200ರಿಂದ ₹300ರ ಒಳಗೆ ಸಿಗುವ ಬಾಡಿಗೆ ಕೊಠಡಿಯನ್ನು ಹುಡುಕುತ್ತೇನೆ’ ಎಂದು ಆಸಿಫ್ ಹೇಳಿದರು. ಅವರು ಊಟ ಮಾಡಿದ್ದಾರೆಯೇ ಎಂದು ಸುದ್ದಿಗಾರರು ಪ್ರಶ್ನೆ ಕೇಳುತ್ತಿದ್ದಂತೆ ಕಣ್ಣೀರು ಹಾಕಿದರು.
ತಮ್ಮ ಗುರುತನ್ನು ಆಸಿಫ್ ಎಂದಷ್ಟೇ ಹೇಳಲು ಇಚ್ಛಿಸಿದ ಅವರು, ಅಫ್ಗಾನಿಸ್ತಾನದ ನ್ಯಾಷನಲ್ ಡೈರೆಕ್ಟರೇಟ್ ಆಫ್ ಸೆಕ್ಯುರಿಟಿಯ (ಎನ್ಡಿಎಸ್) ಅಧಿಕಾರಿ. ‘ಸರ್ಕಾರದ ವಿರುದ್ಧ ದಂಗೆ ಏಳಬೇಕು. ಇಲ್ಲದಿದ್ದರೆ ನಿಮ್ಮನ್ನು ಕೊಲ್ಲುತ್ತೇವೆ ಎಂದು ತಾಲಿಬಾನ್ ನಮಗೆ ನೋಟಿಸ್ ನೀಡಿತ್ತು. ತಾಲಿಬಾನ್ ನಮ್ಮನ್ನು ಹಿಡಿದು ಕೊಲ್ಲುತ್ತಿದೆ. ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದ ಬಳಿಕ ನಾವು ನಂಬಿಕೆಯನ್ನು ಕಳೆದುಕೊಂಡೆವು. ನಾವು ವಾಪಸ್ಸು ಹೋಗುತ್ತೇವೆ ಎಂಬ ಭರವಸೆ ಇಲ್ಲ. ನನ್ನ ಕುಟುಂಬ ಕಾಬೂಲ್ನ ನಮ್ಮ ಮನೆಯಲ್ಲಿ ಅವಿತು ಕುಳಿತಿದೆ. ಅವರ ಜೊತೆ ಸಂಪರ್ಕ ಸಾಧಿಸಲು ಆಗುತ್ತಿಲ್ಲ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.