ಭಾರತ– ಬಾಂಗ್ಲಾ (ಪ್ರಾತಿನಿಧಿಕ ಚಿತ್ರ)
ಢಾಕಾ: ಬಾಂಗ್ಲಾದೇಶದಲ್ಲಿ ಜುಲೈ–ಆಗಸ್ಟ್ನಲ್ಲಿ ಯಾಕಾಗಿ ದಂಗೆ ನಡೆದಿತ್ತು ಎನ್ನುವುದನ್ನು ಭಾರತ ತನ್ನ ಧೋರಣೆ ಬದಲಿಸಿಕೊಂಡು, ಒಪ್ಪಿಕೊಳ್ಳಬೇಕಿದೆ. ಹೀಗಾದಲ್ಲಿ ಮಾತ್ರ ಎರಡೂ ದೇಶಗಳ ನಡುವೆ ಹೊಸದಾಗಿ ದ್ವಿಪಕ್ಷೀಯ ಮಾತುಕತೆ ಸಾಧ್ಯವಾಗಲಿದೆ ಎಂದು ಮಧ್ಯಂತರ ಸರ್ಕಾರದ ಪ್ರಮುಖ ಸಲಹೆಗಾರ ಮಹಫುಜ್ ಆಲಮ್ ಹೇಳಿದ್ದಾರೆ.
ಈ ಹಿಂದಿನ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ದಂಗೆಯ ನಿಜ ಸ್ವರೂಪವನ್ನು ಭಾರತ ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
‘ಭಾರತವು ಜುಲೈ ದಂಗೆಯನ್ನು ಭಯೋತ್ಪಾದನೆ, ಹಿಂದೂ ವಿರೋಧಿ ಮತ್ತು ಇಸ್ಲಾಮಿಸ್ಟ್ ಪ್ರಭುತ್ವದ ಹೇರಿಕೆ ಎಂಬಂತೆ ಪರಿಗಣಿಸುತ್ತಿದೆ. ತನ್ನ ಈ ದೃಷ್ಟಿಕೋನವನ್ನು ಬದಲಿಸಿಕೊಂಡು, ಬಾಂಗ್ಲಾದೇಶದ ವಾಸ್ತವಗಳನ್ನು ಅರಿಯಬೇಕಿದೆ’ ಎಂದು ಮಧ್ಯಂತರ ಸರ್ಕಾರದ ಸಚಿವ, ವಿದ್ಯಾರ್ಥಿ ಚಳವಳಿಯ ನಾಯಕ ಮಹಫುಜ್ ಆಲಮ್ ‘ಫೇಸ್ಬುಕ್’ನಲ್ಲಿ ಬರೆದುಕೊಂಡಿದ್ದಾರೆ.
‘70 ಉಗ್ರರು ಜೈಲಿನಿಂದ ಪರಾರಿಯಾಗಿದ್ದರು’: ಪ್ರಧಾನಿ ಶೇಖ್ ಹಸೀನಾ ಪದಚ್ಯುತಿಗೆ ಕಾರಣವಾದ ವಿದ್ಯಾರ್ಥಿ ದಂಗೆಯ ಸಂದರ್ಭ, 70 ಉಗ್ರರು ಹಾಗೂ ಮರಣದಂಡನೆಗೆ ಒಳಗಾಗಿದ್ದ ಕೈದಿಗಳು ಸೇರಿದಂತೆ 2,200ಕ್ಕೂ ಹೆಚ್ಚು ಮಂದಿ ಜೈಲಿನಿಂದ ಪರಾರಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಂಗೆಯ ಸಂದರ್ಭ ಪರಾರಿಯಾಗಿದ್ದವರನ್ನು ಪತ್ತೆಹಚ್ಚಿ ಮತ್ತೆ ಬಂಧಿಸಿ ಜೈಲಿಗಟ್ಟಲಾಗಿದ್ದು, 700ಕ್ಕೂ ಹೆಚ್ಚು ಕೈದಿಗಳು ಈಗಲೂ ಕಾರಾಗೃಹ ಬಂಧನದಿಂದ ತಪ್ಪಿಸಿಕೊಂಡು ಹೊರಗಿದ್ದಾರೆ ಎಂದು ಕಾರಾಗೃಹಗಳ ಐಜಿ ಜನರಲ್ ಬ್ರಿಗೇಡಿಯರ್ ಸೈಯದ್ ಮೊತಾಹರ್ ಹುಸೇನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.