ಬೀಜಿಂಗ್: ಕೋವಿಡ್ ಕಠಿಣ ನಿರ್ಬಂಧಗಳಿಂದಾಗಿ ಹೋಟೆಲ್ವೊಂದರಲ್ಲಿ ಪ್ರತ್ಯೇಕವಾಸದಲ್ಲಿದ್ದ ನಾಲ್ಕು ತಿಂಗಳ ಹಸುಳೆ, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಇಲ್ಲಿ ಗುರುವಾರ ಮೃತಪಟ್ಟಿದೆ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ.
ಹಸುಳೆ ಸಾವಿಗೆಆರೋಗ್ಯ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಸ್ಥಳೀಯರು ಅವರ ವಿರುದ್ಧ ಕಿಡಿಕಾರಿದ್ದಾರೆ. ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ‘ಶೂನ್ಯ ಕೋವಿಡ್’ ಕಾರ್ಯತಂತ್ರದ ಕುರಿತೂ ಟೀಕೆ ವ್ಯಕ್ತಪಡಿಸಿದ್ದಾರೆ.
‘ಜೆಂಗ್ಝುವಾ ನಗರದ ಹೋಟೆಲ್ವೊಂದರಲ್ಲಿ ತಂದೆಯೊಂದಿಗೆ ಪ್ರತ್ಯೇಕವಾಸದಲ್ಲಿದ್ದ ಹಸುಳೆಯು ವಾಂತಿ ಮತ್ತು ಅತಿಸಾರದಿಂದ ಬಳಲಿತ್ತು. ಅಧಿಕಾರಿಗಳು ತಂದೆ ಮತ್ತು ಮಗಳಿಗೆ ತುರ್ತು ಸೇವೆ ನಿರಾಕರಿಸಿದ್ದರು. 11 ಗಂಟೆ ತರುವಾಯ ಹಸುಳೆಯನ್ನು ಹೋಟೆಲ್ನಿಂದ 100 ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಾಗಲೇ ಹಸುಳೆ ಮೃತಪಟ್ಟಿತ್ತು’ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಕೆಲ ದಿನಗಳ ಹಿಂದೆ 3 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದ. ಆಗಲೂ ಜನಾಕ್ರೋಶ ವ್ಯಕ್ತವಾಗಿತ್ತು. ಇನ್ನು ಮುಂದೆ ಪ್ರತ್ಯೇಕವಾಸದಲ್ಲಿದ್ದವರಿಗೆ ತುರ್ತು ಸೇವೆ ಒದಗಿಸುವಲ್ಲಿ ಯಾವುದೇ ಲೋಪ ಆಗುವುದಿಲ್ಲ ಎಂದು ಸರ್ಕಾರ ಆಗ ಹೇಳಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.