
ಕಠ್ಮಂಡು: ಪದಚ್ಯುತ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ಹಿಂದಿನ ಗೃಹ ಸಚಿವ ರಮೇಶ್ ಲೇಖಕ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಇಲ್ಲಿನ ಮೈತಿಘರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಡಾ. ನಿಕೋಲಸ್ ಭುಸಲ್ ಸೇರಿದಂತೆ ‘ಜೆನ್–ಝಿ’ ಗುಂಪಿಗೆ ಸೇರಿದ 18 ಹೋರಾಟಗಾರರನ್ನು ನೇಪಾಳ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮಗಳ ನಿಷೇಧದ ವಿರುದ್ಧ ನಡೆಯುತ್ತಿರುವ ಜೆನ್–ಝಿ ಗುಂಪಿನ ಈ ಬಣದ ಪ್ರತಿಭಟನೆಯು ಒಂದು ತಿಂಗಳು ಪೂರೈಸಿದೆ. ಪ್ರತಿಭಟನೆ ನಡೆಸುತ್ತಿದ್ದ ಭುಸಲ್ ಮತ್ತು ಸುರೇಂದ್ರ ಘರ್ತಿ ಅವರನ್ನು ಗಲಭೆ ನಿಗ್ರಹ ಪೊಲೀಸರ ಬಿಗಿ ಭದ್ರತೆಯ ನಡುವೆ ವಶಕ್ಕೆ ಪಡೆಯಲಾಯಿತು. ಇದಕ್ಕೂ ಮುಂಚಿತವಾಗಿ ಅಧಿಕಾರಿಗಳು ಮೈತಿಘರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದರು.
‘ಸುಶೀಲಾ ಕಾರ್ಕಿ ನೇತೃತ್ವದ ಉಸ್ತುವಾರಿ ಸರ್ಕಾರ ರಚನೆಯಾದರೂ ಸರ್ಕಾರ ಜೆನ್–ಝಿ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾದ ಕಾರಣ ಪ್ರತಿಭಟನೆಯನ್ನು ನಡೆಸಿದ್ದೇವೆ’ ಎಂದು ಪ್ರತಿಬಟನಾಕಾರರು ಹೇಳಿದ್ದಾರೆ.
ಸೆಪ್ಟೆಂಬರ್ 8 ಮತ್ತು 9ರಂದು ಕಠ್ಮಂಡುವಿನಲ್ಲಿ ಜೆನ್–ಝಿ ಗುಂಪಿನ ನೇತೃತ್ವದಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಸಾವಿರಾರು ಯುವಜನರು ಭಾಗವಹಿಸಿದ್ದರು. ಈ ವೇಳೆ 76 ಜನರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.