ಹಫೀಜ್ ಸಯೀದ್
ಜೆರುಸಲೆಮ್: ಭಯೋತ್ಪಾದಕರಾದ ಹಫೀಜ್ ಸಯೀದ್, ಸಾಜಿದ್ ಮಿರ್ ಮತ್ತು ಜಕಿಯುರ್ ರೆಹಮಾನ್ ಲಖ್ವಿಯನ್ನು ಪಾಕಿಸ್ತಾನವು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಇಸ್ರೇಲ್ನ ಭಾರತದ ರಾಯಭಾರಿ ಜೆ ಪಿ ಸಿಂಗ್ ಹೇಳಿದ್ದಾರೆ.
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹವ್ವುರ್ ರಾಣಾನನ್ನು ಅಮೆರಿಕ ಹಸ್ತಾಂತರಿಸಿದಂತೆ ಪಾಕಿಸ್ತಾನವೂ ಮಾಡಬಹುದು ಎಂದಿದ್ದಾರೆ. ,
ಭಯೋತ್ಪಾದನೆ ಜಾಗತಿಕ ಬೆದರಿಕೆ ಎಂದು ವಾದಿಸಿರುವ ಸಿಂಗ್, ಅದರ ವಿರುದ್ಧ ಅಂತರರಾಷ್ಟ್ರೀಯ ಒಕ್ಕೂಟವನ್ನು ರಚಿಸುವಂತೆಯೂ ಕರೆ ನೀಡಿದರು.
ಇಸ್ರೇಲಿ ಟಿವಿ ಚಾನೆಲ್ i24ಗೆ ನೀಡಿದ ಸಂದರ್ಶನದಲ್ಲಿ ಸಿಂಗ್, ಪಾಕಿಸ್ತಾನದ ವಿರುದ್ಧ ಭಾರತದ ಆಪರೇಷನ್ ಸಿಂಧೂರಕ್ಕೆ ವಿರಾಮ ನೀಡಲಾಗಿದೆ. ಅದಿನ್ನೂ ಮುಗಿದಿಲ್ಲ ಎಂದು ಒತ್ತಿ ಹೇಳಿದರು.
ಭಾರತದ ಆಕ್ರಮಣಕ್ಕೆ ಕಾರಣವಾದ ಘಟನೆಗಳನ್ನು ವಿವರಿಸುತ್ತಾ, ಪಾಕಿಸ್ತಾನದಲ್ಲಿನ ಭಯೋತ್ಪಾದಕ ಗುಂಪುಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಿಂಗ್ ಹೇಳಿದರು.
ಪಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದಕರು ಧರ್ಮದ ಆಧಾರದ ಮೇಲೆ ಜನರನ್ನು ಕೊಂದರು. ಪ್ರತಿಯೊಬ್ಬರನ್ನೂ ಅವರ ಧರ್ಮ ಕೇಳಿ ಗುಂಡಿಕ್ಕಿದ್ದಾರೆ. 26 ಅಮಾಯಕ ಜೀವಗಳು ಬಲಿಯಾದವು ಎಂದು ಹೇಳಿದ್ದಾರೆ.
ಭಾರತದ ಕಾರ್ಯಾಚರಣೆಯು ಭಯೋತ್ಪಾದಕ ಗುಂಪುಗಳು ಮತ್ತು ಅವುಗಳ ಮೂಲಸೌಕರ್ಯಗಳ ವಿರುದ್ಧವಾಗಿತ್ತು, ಇದಕ್ಕೆ ಪಾಕಿಸ್ತಾನವು ಭಾರತದ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಪ್ರತಿಕ್ರಿಯಿಸಿತು ಎಂದು ಅವರು ಒತ್ತಿ ಹೇಳಿದ್ದಾರೆ.
ಭಾರತದಲ್ಲಿ ನಡೆದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿಗಳ ದೀರ್ಘ ಪಟ್ಟಿಯನ್ನು ಉಲ್ಲೇಖಿಸಿದ ಸಿಂಗ್, ಜೈಶ್ ಎ ಮೊಹಮ್ಮದ್ ಮತ್ತು ಲಷ್ಕರ್ ಎ ತಯಬಾ ಈ ದಾಳಿಗಳ ರೂವಾರಿ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.