ADVERTISEMENT

ವಾಣಿಜ್ಯ ಮಾತುಕತೆ ಪುನರಾರಂಭಕ್ಕೆ ಭಾರತ-ಐರೋಪ್ಯ ಒಕ್ಕೂಟ ಒಪ್ಪಿಗೆ ಸೂಚನೆ

ಪಿಟಿಐ
Published 9 ಮೇ 2021, 1:28 IST
Last Updated 9 ಮೇ 2021, 1:28 IST
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಐರೋಪ್ಯ ಒಕ್ಕೂಟದ (ಇಯು) 27 ಸದಸ್ಯ ರಾಷ್ಟ್ರಗಳ ನಾಯಕರ ನಡುವೆ ಶನಿವಾರ ನಡೆದ ವರ್ಚುವಲ್ ಸಭೆಯಲ್ಲಿ, ಎಂಟು ವರ್ಷಗಳ ನಂತರ ಸಮತೋಲಿತ ಮತ್ತು ಸಮಗ್ರ ವಾಣಿಜ್ಯ ಒಪ್ಪಂದಕ್ಕಾಗಿ ಮಾತುಕತೆಯನ್ನು ಪುನರಾರಂಭಿಸುವ ನಿರ್ಧಾರವನ್ನು ಪ್ರಕಟಿಸಿದೆ.

ಈ ಸಂದರ್ಭದಲ್ಲಿ ಕೋವಿಡ್-19 ಲಸಿಕೆಗಳ ಪೇಟೆಂಟ್‌ಗಳನ್ನು ಹಂಚಿಕೊಳ್ಳುವ ಪ್ರಸ್ತಾಪವನ್ನು ಬೆಂಬಲಿಸುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದು, ಇದರಿಂದಾಗಿ ಜಗತ್ತಿಗೆ ಸಮಾನವಾದ ಲಸಿಕೆ ಲಭ್ಯತೆ ಸಿಗಲಿದೆ ಅಧಿಕಾರಿಗಳು ತಿಳಿಸಿದ್ದಾರೆ.

ಐರೋಪ್ಯ ಒಕ್ಕೂಟದ ಕೌನ್ಸಿಲ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದಾರೆ. ಮಹತ್ವಾಕಾಂಕ್ಷೆಯ ಪಾಲುದಾರಿಕೆ, ಕೋವಿಡ್-19 ಸಾಂಕ್ರಾಮಿಕ ರೋಗದ ಬಿಕ್ಕಟ್ಟು ಹಾಗೂ ಆರೋಗ್ಯ ರಕ್ಷಣೆಯ ಸಹಕಾರ, ಸುಸ್ಥಿರ ಹಾಗೂ ಸಮಗ್ರ ಪ್ರಗತಿ, ಭಾರತ ಹಾಗೂ ಐರೋಪ್ಯ ಒಕ್ಕೂಟದ ಸಹಭಾಗಿತ್ವ ಬಲವರ್ಧನೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ADVERTISEMENT

ಸಮತೋಲಿತ ಮತ್ತು ಸಮಗ್ರ ಮುಕ್ತ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದಗಳಿಗಾಗಿ (ಎಫ್‌ಟಿಎ) ಮಾತುಕತೆಗಳನ್ನು ಪುನರಾರಂಭಿಸಲು ಉಭಯ ಪಕ್ಷಗಳು ಒಪ್ಪಿಗೆ ಸೂಚಿಸಿವೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ವಿಕಾಸ್ ಸ್ವರೂಪ್ ಹೇಳಿದ್ದಾರೆ.

2007ರಲ್ಲಿ ಪ್ರಾರಂಭಿಸಲಾದ ಮಹತ್ವಾಕಾಂಕ್ಷೆಯ ಮುಕ್ತ ವಾಣಿಜ್ಯ ಒಪ್ಪಂದದ ಮಾತುಕತೆಯನ್ನು 2013ರಲ್ಲಿ ಸುಂಕ, ಮಾರುಕಟ್ಟೆ ಪ್ರವೇಶಾವಕಾಶ ಸೇರಿದಂತೆ ನಿರ್ಣಾಯಕ ವಿಷಯಗಳಲ್ಲಿ ಭಿನ್ನಭಿಪ್ರಾಯ ಮೂಡಿಬಂದ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು.

ಸಾರ್ವತ್ರಿಕ, ಸುರಕ್ಷಿತ ಮತ್ತು ಕೈಗೆಟುಕುವಂತೆ ಕೋವಿಡ್-19 ಲಸಿಕೆಯ ಲಭ್ಯತೆ, ರೋಗ ನಿರ್ಣಯ, ಚಿಕಿತ್ಸೆ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆಗೆ ಭಾರತ ಹಾಗೂ ಐರೋಪ್ಯ ಒಕ್ಕೂಟಗಳು ಬೆಂಬಲ ಸೂಚಿಸಿವೆ ಎಂದು ಜಂಟಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.