ಮಾಸ್ಕೊ: ‘ಅಂತರರಾಷ್ಟ್ರೀಯ ಕಾನೂನುಗಳ ರಕ್ಷಣೆಯನ್ನು ಖಾತರಿಪಡಿಸಿಕೊಳ್ಳುವುದರ ಜತೆಗೆ ಆಧುನಿಕ ಸವಾಲುಗಳನ್ನು ಜಂಟಿಯಾಗಿ ಎದುರಿಸಲು ನಾವು ಬದ್ಧರಾಗಿದ್ದೇವೆ. ರಷ್ಯಾ ಮತ್ತು ಭಾರತದ ನಡುವಿನ ಸ್ನೇಹವು ಸರ್ವ ಕಾಲಕ್ಕೂ ಭದ್ರವಾಗಿರಲಿದೆ’ ಎಂದು ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ಸರ್ಗೆ ಶೊಯಿಗು ಗುರುವಾರ ಹೇಳಿದ್ದಾರೆ.
ಇಂಧನ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾತುಕತೆ ನಡೆಸಲು ಹಾಗೂ ಭಾರತಕ್ಕೆ ಪುಟಿನ್ ಭೇಟಿಯ ಸಿದ್ದತೆ ಕುರಿತಂತೆ ಚರ್ಚಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಬಾಲ್ ಅವರು ರಷ್ಯಾಗೆ ತೆರಳಿದ್ದು, ಗುರುವಾರ ಸರ್ಗೆ ಅವರನ್ನು ಭೇಟಿಯಾಗಿದ್ದಾರೆ.
ಈ ವೇಳೆ ಮಾತನಾಡಿರುವ ಸರ್ಗೆ, ‘ಪ್ರಧಾನಿ ಮೋದಿ ಹಾಗೂ ಪುಟಿನ್ ಅವರು ನಿರಂತರ ಸಂಪರ್ಕದಲ್ಲಿದ್ದು, ಉಭಯ ರಾಷ್ಟ್ರಗಳ ನಡುವಿನ ರಾಜಕೀಯ ಸಂಬಂಧ ಉತ್ತಮವಾಗಿದೆ. ವಿಶ್ವಾಸ, ಪರಸ್ಪರ ಹಿತಾಸಕ್ತಿ, ನಂಬಿಕೆಯ ಆಧಾರದಲ್ಲಿ ಭಾರತದೊಂದಿಗೆ ಹೊಂದಿರುವ ಉತ್ತಮ ಕಾರ್ಯತಂತ್ರ ಪಾಲುದಾರಿಕೆಯನ್ನು ಬಲಗೊಳಿಸುವುದು ರಷ್ಯಾದ ಆದ್ಯತೆ’ ಎಂದಿದ್ದಾರೆ.
‘ಅಲ್ಲದೇ, ಭಾರತ–ರಷ್ಯಾ ನಡುವಿನ ಸಂಬಂಧವು ಸರ್ವಕಾಲಕ್ಕೂ ಭದ್ರವಾಗಿ ಇರಲಿದೆ ಎಂದಿರುವ ಅವರು, ಶೀಘ್ರವೇ ನಮ್ಮ ನಾಯಕರ ನಡುವೆ ಪೂರ್ಣ ಪ್ರಮಾಣದ ಮಾತುಕತೆಯೂ ನಡೆಯಲಿದೆ. ಇದಕ್ಕಾಗಿ ದಿನಾಂಕ ನಿಗದಿಪಡಿಸಲಿದ್ದೇವೆ’ ಎಂದೂ ತಿಳಿಸಿದ್ದಾರೆ.
ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ವಿಚಾರದಲ್ಲಿ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದ್ದು, ಭಾರತದ ಮೇಲೆ ಶೇ 25ರ ಪ್ರತಿಸುಂಕದ ಜತೆಗೆ ಶೇ 25 ಹೆಚ್ಚುವರಿ ಸುಂಕ ವಿಧಿಸಿದೆ. ಈ ನಡುವೆಯೇ ದೋಬಾಲ್ ಅವರು ರಷ್ಯಾ ಭೇಟಿ ಕೈಗೊಂಡಿರುವುದು ಮಹತ್ವ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.