ADVERTISEMENT

‘ಮಾಜಿ ಪೊಲೀಸ್‌ ಅಧಿಕಾರಿ ಸಂಜೀವ್‌ ಭಟ್‌ಗೆ ಜಾಮೀನು ನೀಡಿ’

ಪಿಟಿಐ
Published 19 ಜನವರಿ 2021, 6:23 IST
Last Updated 19 ಜನವರಿ 2021, 6:23 IST
ಸಂಜೀವ್‌ ಭಟ್‌
ಸಂಜೀವ್‌ ಭಟ್‌   

ವಾಷಿಂಗ್ಟನ್‌: ಭಾರತ ಮತ್ತು ಅಮೆರಿಕದ ಹಲವು ನಾಗರಿಕ ಹಕ್ಕುಗಳ ಸಂಘಟನೆಗಳು ಮತ್ತು ಕಾರ್ಯಕರ್ತರು ಮಾಜಿ ಪೊಲೀಸ್ ಅಧಿಕಾರಿ ಸಂಜೀವ್ ಭಟ್‌ಗೆ ಜಾಮೀನು ನೀಡುವಂತೆ ಸುಪ್ರೀಂಕೋರ್ಟ್‌ಗೆ ಸೋಮವಾರ ಮನವಿ ಮಾಡಿದ್ದಾರೆ.

ಭಾರತೀಯ ಅಮೆರಿಕನ್‌ ಮುಸ್ಲಿಂ ಕೌನ್ಸಿಲ್‌ (ಐಎಎಂಸಿ), ಹಿಂದೂ ಮಾನವ ಹಕ್ಕುಗಳ ಸಂಘಟನೆ ಮತ್ತು ಅದರ ಕಾರ್ಯಕರ್ತರು ವರ್ಚುವಲ್‌ ಸುದ್ದಿಗೋಷ್ಠಿ ಆಯೋಜಿಸಿದ್ದರು. ಈ ವೇಳೆ ಮಾತನಾಡಿದ ಅವರು,‘ ಕೊಲೆ ಪ್ರಕರಣದಲ್ಲಿ ನಕಲಿ ಸಾಕ್ಷ್ಯಗಳ ಆಧಾರದ ಮೇರೆಗೆ ಸಂಜೀವ್‌ ಭಟ್‌ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಇದು ಸರಿಯಲ್ಲ’ ಎಂದು ದೂರಿದ್ದಾರೆ.

ಸುಪ್ರೀಂಕೋರ್ಟ್‌ ಜನವರಿ 20 ರಂದುಸಂಜೀವ್‌ ಭಟ್‌ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಲಿದೆ.

ADVERTISEMENT

ಸಮಾಜದ ಉಳಿತಿಗಾಗಿ ಭಟ್‌ ಅವರು ಸೇವೆ ಸಲ್ಲಿಸಿದ್ದಾರೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದ ಅವರು ಅಧಿಕಾರದಲ್ಲಿ ಇದ್ದರೂ ಸತ್ಯವನ್ನು ಹೇಳುವ ಸಾಮರ್ಥ್ಯ ಹೊಂದಿದ್ದರು. ಅಂತಹ ವ್ಯಕ್ತಿಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರ್‌ ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಸಂಜೀವ್ ಭಟ್‌ ಪ್ರಕರಣದಿಂದ ಭಾರತೀಯರು ಎಚ್ಚೆತ್ತುಕೊಂಡು ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅವರಿಗೆ ನ್ಯಾಯಕೊಡಿಸಲು ಮುಂದಾಗಬೇಕು. ಭಾರತೀಯ ಸಂವಿಧಾನವು ಸಾಂವಿಧಾನಿಕ ಮೌಲ್ಯಗಳು ಮತ್ತು ಮೂಲಭೂತ ಹಕ್ಕುಗಳನ್ನು ನೀಡಿದೆ. ಆದರೆ ಹೆಚ್ಚಿನ ಪ್ರಕರಣಗಳಲ್ಲಿ ಈ ಮೂಲಭೂತ ಹಕ್ಕುಗಳನ್ನು ದುರ್ಬಲಗೊಳಿಸಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

‘2002ರಲ್ಲಿ ನಡೆದ ಹತ್ಯಾಕಾಂಡವನ್ನು ವಿರೋಧಿಸಿದಕ್ಕಾಗಿ ಸಂಜೀವ್‌ ಭಟ್‌ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ನಾವು ಸಂಜೀವ್‌ ಭಟ್‌ ಅವರನ್ನು ಹೊರ ತರಲು ಚಳವಳಿಯನ್ನು ನಡೆಸಬೇಕು’ ಎಂದು ಖ್ಯಾತ ಸಾಕ್ಷ್ಯಚಿತ್ರ ನಿರ್ಮಾಪಕ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಆನಂದ್ ಪಟ್‌ವರ್ಧನ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.