ಕೊಲಂಬೊ: ‘ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ನಮಗೆ ಭಾರತ ನೀಡಿದ ಹಣಕಾಸಿನ ನೆರವು ದತ್ತಿ ದೇಣಿಗೆಗಳಲ್ಲ’ ಎಂದು ಶ್ರೀಲಂಕಾದ ಸಂಸತ್ತಿಗೆ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ತಿಳಿಸಿದ್ದಾರೆ. ಅಲ್ಲದೆ, ಈ ಹಣಕಾಸಿನ ನೆರವಿನ ಸಾಲವನ್ನು ಮರುಪಾವತಿಸಲೇಬೇಕು ಎಂದು ಹೇಳಿದ್ದಾರೆ.
‘ಭಾರತದಿಂದ ನಾವು ಸಾಲದ ರೂಪದಲ್ಲಿ ₹31 ಸಾವಿರ ಕೋಟಿ ನೆರವು ಪಡೆದಿದ್ದೇವೆ. ಅಲ್ಲದೆ, ಇನ್ನೂ ಹೆಚ್ಚಿನ ಹಣಕಾಸಿನ ನೆರವು ನೀಡುವಂತೆ ಭಾರತಕ್ಕೆ ಕೋರಿದ್ದೆವು. ಆದರೆ, ಇಂಥ ಸಂದರ್ಭದಲ್ಲಿ ಭಾರತವೊಂದೇ ನಿರಂತರವಾಗಿ ನಮ್ಮ ನೆರವಿಗೆ ನಿಲ್ಲಲು ಸಾಧ್ಯವಿಲ್ಲ. ನಮಗೆ ಹಣಕಾಸಿನ ನೆರವು ನೀಡಲು ಭಾರತಕ್ಕೂ ಒಂದು ಮಿತಿ ಇದೆ. ಜೊತೆಗೆ ಈ ಸಾಲಗಳನ್ನು ತೀರಿಸಲು ನಾವು ಸಹ ಯೋಜನೆ ಹಾಕಿಕೊಳ್ಳಲೇಬೇಕಿದೆ. ಯಾಕೆಂದರೆ, ಇದು ದತ್ತಿ ದೇಣಿಗೆಯ ನೆರವು ಅಲ್ಲ’ ಎಂದು ತಿಳಿಸಿದರು.
ಭಾರತದ ನಿಯೋಗ ನಾಳೆ ಲಂಕಾಕ್ಕೆ
ಕೊಲಂಬೊ: ವಿದೇಶಿ ವಿನಿಮಯದ ಕೊರತೆಯಿಂದ ಆರ್ಥಿಕ ದುಸ್ಥಿತಿಗೆ ಸಿಲುಕಿದ ಶ್ರೀಲಂಕಾಕ್ಕೆ ಭಾರತದಿಂದ ಮತ್ತೊಂದು ಸುತ್ತಿನ ಹಣಕಾಸಿನ ನೆರವಿನ ಅಗತ್ಯವಿದೆಯೇ ಎಂಬ ಪರಿಶೀಲನೆಗಾಗಿ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ನೇತೃತ್ವದ ಭಾರತ ಸರ್ಕಾರದ ನಿಯೋಗವು ಗುರುವಾರ ಶ್ರೀಲಂಕಾಕ್ಕೆ ಬರಲಿದೆ. ಈ ತಂಡವು, ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಅವಲೋಕಿಸಲಿದೆ.
3 ಗಂಟೆಗಳ ಕಾಲ ಲಂಕಾದಲ್ಲಿ ಉಳಿಯಲಿರುವ ನಾಗೇಶ್ವರನ್ ನೇತೃತ್ವದ ನಿಯೋಗವು, ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ವಿಕ್ರಮಸಿಂಘೆ ಅವರ ಜೊತೆಗೂ ಮಾತುಕತೆ ನಡೆಸಲಿದೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.