ವಾಷಿಂಗ್ಟನ್: ಪ್ರಾದೇಶಿಕ ಹಾಗೂ ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡು, ದೊಡ್ಡ ಶಕ್ತಿಯಾಗಿ ಹೊರಹೊಮ್ಮಬೇಕು ಎಂಬ ಭಾರತದ ಮಹತ್ವಾಕಾಂಕ್ಷೆಗೆ, ಆ ದೇಶದಲ್ಲಿ ಕೋವಿಡ್–19 ಪಿಡುಗು ಸೃಷ್ಟಿಸಿರುವ ಬಿಕ್ಕಟ್ಟು ಅಡ್ಡಿಯಾಗಿದೆ ಎಂದು ಅಮೆರಿಕದ ರಾಜಕೀಯ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಸೇರಿದಂತೆ ತನ್ನ ಮಿತ್ರ ರಾಷ್ಟ್ರಗಳ ನೆರವಿನೊಂದಿಗೆ ಭಾರತ ಈ ಬಿಕ್ಕಟ್ಟಿನಿಂದ ಹೊರಗೆ ಬಂದು, ಚೇತರಿಸಿಕೊಳ್ಳಬೇಕು. ಇಲ್ಲದಿದ್ದರೆ ಇಂಡೋ–ಪೆಸಿಫಿಕ್ ಪ್ರದೇಶದಲ್ಲಿ ಭಾರತ ಹೊಂದಿರುವ ಹಿಡಿತದ ಮೇಲೂ ಈ ಬಿಕ್ಕಟ್ಟು ಪರಿಣಾಮ ಬೀರುವುದು ಎಂದು ಹಡ್ಸನ್ ಇನ್ಸ್ಟಿಟ್ಯೂಟ್ನ ಚಿಂತಕರು ಎಚ್ಚರಿಸಿದ್ದಾರೆ.
ಹಡ್ಸನ್ ಇನ್ಸ್ಟಿಟ್ಯೂಟ್ನ ದಕ್ಷಿಣ ಮತ್ತು ಮಧ್ಯ ಏಷ್ಯಾ ವಿಭಾಗದ ನಿರ್ದೇಶಕ ಹುಸೇನ್ ಹಕ್ಕಾನಿ, ಸಂಶೋಧಕಿ ಅಪರ್ಣಾ ಪಾಂಡೆ ಸಿದ್ಧಪಡಿಸಿರುವ ವರದಿಯಲ್ಲಿ ಕೋವಿಡ್–19ನಿಂದಾಗಿ ಭಾರತ ಎದುರಿಸುತ್ತಿರುವ ಬಿಕ್ಕಟ್ಟು, ಅದಕ್ಕೆ ಪರಿಹಾರಗಳನ್ನು ವಿವರಿಸಿದ್ದಾರೆ.
ದಕ್ಷಿಣ ಏಷ್ಯಾದ ಪ್ರಬಲ ಶಕ್ತಿಯಾಗಿರುವ ಭಾರತ ಈ ಸ್ಥಾನವನ್ನು ಉಳಿಸಿಕೊಳ್ಳಬೇಕು ಎಂಬುದು ಅಮೆರಿಕದ ಒತ್ತಾಸೆಯಾಗಿದೆ. ಅಲ್ಲದೇ, ದಕ್ಷಿಣ ಏಷ್ಯಾದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಚೀನಾ ಪ್ರಯತ್ನ ಮುಂದುವರಿಸಿರುವಾಗ, ಭಾರತ ಸಹ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.