ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಉಪಸ್ಥಿತಿಯು ವಿಶ್ವದಾದ್ಯಂತ ‘ವಸುಧೈವ ಕುಟುಂಬಕಂ‘ ಚಿಂತನೆ ಮಾರ್ದನಿಸಲು ನೆರವಾಗಲಿದೆ ಎಂದು ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ.ಎಸ್.ತಿರುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಸಂಸ್ಥೆಯ ಪ್ರಭಾವಿ ಮಂಡಳಿಯಲ್ಲಿ ಶಾಶ್ವತಯೇತರ ಸ್ಥಾನಕ್ಕೆ ಚುನಾವಣೆಗೆ ವೇದಿಕೆ ಅಣಿಯಾಗಿರುವ ಹಿಂದೆಯೇ ಈ ಹೇಳಿಕೆಯು ಹೊರಬಿದ್ದಿದೆ.
ಶಾಶ್ವತಯೇತರ ಸದಸ್ಯತ್ವ ದೇಶವಾಗಿ ಸೇರ್ಪಡೆಗೊಳ್ಳಲು ಭಾರತ ಸಜ್ಜಾಗಿದೆ. ಈ ಸ್ಥಾನಕ್ಕಾಗಿ ಜೂನ್ 17ರಂದು ಚುನಾವಣೆಯು ನಡೆಯಲಿದೆ.
ಏಷ್ಯಾ ಫೆಸಿಪಿಕ್ ವಲಯದಿಂದ 2021–22ನೇ ಸಾಲಿಗಾಗಿ ಭಾರತ ಈ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿದೆ. ಈ ವಲಯದಿಂದ ಸ್ಪರ್ಧೆ ನಡೆಸಿರುವ ಏಕೈಕ ದೇಶವಾಗಿದ್ದು, ಗೆಲುವು ಬಹುತೇಕ ನಿಶ್ಚಿತವಾಗಿದೆ.
ಚೀನಾ ಮತ್ತು ಪಾಕಿಸ್ತಾನವನ್ನು ಒಳಗೊಂಡ 55 ಸದಸ್ಯ ಬಲದ ಏಷಿಯಾ ಫೆಸಿಪಿಕ್ ವಲಯವು ಭಾರತದ ಸ್ಪರ್ಧೆಯನ್ನು ಕಳೆದ ವರ್ಷದ ಜೂನ್ ತಿಂಗಳಲ್ಲಿ ಅನುಮೋದಿಸಿತ್ತು.
ವಿಶ್ವಸಂಸ್ಥೆಯ ಜೊತೆಗೆ ಭಾರತದ ಪಯಣ ಒಂದು ಅವಿಸ್ಮರಣೀಯ ಬೆಳವಣಿಗೆ. ವಿಶ್ವಸಂಸ್ಥೆಯ ಸ್ಥಾಪಕ ದೇಶಗಳಲ್ಲಿ ಒಂದಾಗಿ, ವಿಶ್ವಸಂಸ್ಥೆಯ ಗುರಿಗಳ ಸಾಧನೆಯಲ್ಲಿ ಭಾರತದ ಕೊಡುಗೆಯು ಅನನ್ಯವಾದುದು ಎಂದು ತಿರುಮೂರ್ತಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.