ಕಾಬೂಲ್: ಆಫ್ಗಾನಿಸ್ತಾನದ ರಾಜಧಾನಿಯಲ್ಲಿ ಬುಧವಾರ ನಡೆದ ಬಾಂಬ್ ದಾಳಿಯಲ್ಲಿ ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
ದೇಶದ ಉಪಾಧ್ಯಕ್ಷರನ್ನೇ ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ಅದೃಷ್ಟವಶಾತ್ ಅವರಿಗೆ ಏನೂ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ಯಾವ ಸಂಘಟನೆಯೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ತಾನು ದಾಳಿ ನಡೆಸಿಲ್ಲ ಎಂದು ತಾಲಿಬಾನ್ ಉಗ್ರ ಸಂಘಟನೆ ಹೇಳಿಕೊಂಡಿದೆ.
ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರ ಬೆಂಗಾವಲು ವಾಹನಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಆಫ್ಗಾನಿಸ್ತಾನದ ವಕ್ತಾರ ರಜ್ವಾನ್ ಮುರಾದ್ ತಿಳಿಸಿದ್ದಾರೆ.
ಆಫ್ಗಾನಿಸ್ತಾನದ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥರೂ ಆಗಿರುವ ಸಲೇಗ್, ‘ದಾಳಿಯಿಂದ ತಮಗೆ ಏನೂ ಅಪಾಯ ಸಂಭವಿಸಿಲ್ಲ. ಸಣ್ಣ–ಪುಟ್ಟ ಸುಟ್ಟ ಗಾಯಗಳಾಗಿವೆಯಷ್ಟೆ’ ಎಂದು ಹೇಳಿಕೆ ನೀಡಿದ್ದಾರೆ.
ಭಾರತ ಖಂಡನೆ: ಕಾಬೂಲ್ನಲ್ಲಿ ನಡೆದ ಬಾಂಬ್ ದಾಳಿಯನ್ನು ಭಾರತ ಖಂಡಿಸಿದೆ. ಆಫ್ಗಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತವು ಸದಾ ಆ ದೇಶದ ಜತೆಗಿರಲಿದೆ ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.