ADVERTISEMENT

ಉಗ್ರವಾದ ಹತ್ತಿಕ್ಕಲು ಕಾನೂನು: ರಾನಿಲ್‌ ವಿಕ್ರಮಸಿಂಘೆ

ಅಂತರರಾಷ್ಟ್ರೀಯ ಸಹಕಾರ ದಿನದಲ್ಲಿ ಪ್ರಧಾನಿ ವಿಕ್ರಮಸಿಂಘೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 20:09 IST
Last Updated 22 ಜುಲೈ 2019, 20:09 IST
ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ
ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ   

ಕೊಲಂಬೊ (ಪಿಟಿಐ): ಭಯೋತ್ಪಾದನೆಯನ್ನು ಹತ್ತಿಕ್ಕಲು ಹೊಸ ಕಾನೂನು ಜಾರಿಗೆ ತರಲಾಗುವುದು ಎಂದು ಶ್ರೀಲಂಕಾ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಹೇಳಿದ್ದಾರೆ.

ಈಸ್ಟರ್‌ ಹಬ್ಬದಂದುದೊಡ್ಡ ಪ್ರಮಾಣದಲ್ಲಿ ನಡೆದಂತಹ ಉಗ್ರರ ದಾಳಿಯನ್ನು ಎದುರಿಸಲು ಅಸ್ತಿತ್ವದಲ್ಲಿರುವ ಕಾನೂನುಗಳು ಅಷ್ಟೇನೂ ಸಮರ್ಪಕವಾಗಿಲ್ಲ. ಆದ್ದರಿಂದ ಹೊಸ ಕಾನೂನು ಜಾರಿಗೆ ತರಲು ನಿರ್ಣಯಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ಏಪ್ರಿಲ್‌ 21 ರಂದು ಉಗ್ರರು ನಡೆಸಿದ ಬಾಂಬ್‌ ದಾಳಿಯಲ್ಲಿ 258 ಮಂದಿ ಮೃತಪಟ್ಟಿದ್ದನ್ನು ಪ್ರಸ್ತಾಪಿಸಿದ ಅವರು, ಈ ಘಟನೆಯಿಂದ ಭಯದ ವಾತಾವರಣ ಸೃಷ್ಟಿಯಾಗಿತ್ತು. ಇಂಥ ಘಟನೆ ಮುಂದೆಂದೂ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಹಾಗೂ ರಾಷ್ಟ್ರೀಯ ಭದ್ರತೆಗಾಗಿ ಹೊಸ ವ್ಯವಸ್ಥೆ ಜಾರಿಗೆ ತರುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿರುವುದಾಗಿ ಕೊಲಂಬೊ
ಪೇಜ್‌ ವರದಿ ಮಾಡಿದೆ.

ADVERTISEMENT

97ನೇ ಅಂತರರಾಷ್ಟ್ರೀಯ ಸಹಕಾರ ದಿನದಲ್ಲಿ ಮಾತನಾಡಿದ ಅವರು, ಸ್ಥಳೀಯ ಜಿಹಾದಿ ಗುಂಪಿನ ಮೇಲೆ ದಾಳಿಯ ಆರೋಪವನ್ನು ಹೊರಿಸಲಾಗಿದೆ. ಈ ದಾಳಿಯೊಂದಿಗೆ ಸಂಪರ್ಕ ಹೊಂದಿರುವ ಎಲ್ಲ ಶಂಕಿತರನ್ನು ಮತ್ತು ವಿದೇಶದಲ್ಲಿದ್ದ ಒಬ್ಬನನ್ನು ಬಂಧಿಸ
ಲಾಗಿದೆ. ಸ್ಥಳೀಯ ಸಂಘಟನೆ ನ್ಯಾಷನಲ್‌ ತೌಹೀದ್‌ ಜಮಾಅತ್ ಜತೆ ಸಂಪರ್ಕ ಹೊಂದಿರುವ 200 ಮಂದಿ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.

‘ಭಯೋತ್ಪಾದನೆ ನಿಗ್ರಹಕ್ಕಾಗಿ ಇಂಗ್ಲೆಂಡ್‌ನಲ್ಲಿ 2001 ರಿಂದ 2019ರ ಅವಧಿಯಲ್ಲಿ ಕಾನೂನಿಗೆ 15 ಬಾರಿ ತಿದ್ದುಪಡಿ ತರಲಾಗಿದೆ. ಉಗ್ರರನ್ನು ಹತ್ತಿಕ್ಕಲು ನಮ್ಮಲ್ಲಿ ಈಗಿರುವ ಕಾನೂನುಗಳು ಸಮರ್ಪಕವಾಗಿಲ್ಲ. ಆದ್ದರಿಂದ ಹೊಸ ಕಾನೂನುಗಳನ್ನು ಜಾರಿಗೆ ತರುವ ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

ಆ. 5 ರಂದು ಮಹಾ ಮೈತ್ರಿಕೂಟ ಅಸ್ತಿತ್ವಕ್ಕೆ

ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ನೇತೃತ್ವದಲ್ಲಿ ಮಹಾ ಮೈತ್ರಿಕೂಟ ಆಗಸ್ಟ್‌ 5ಕ್ಕೆ ಅಸ್ತಿತ್ವಕ್ಕೆ ಬರಲಿದ್ದು, ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಕೊಲಂಬೊಪೇಜ್‌ ವರದಿ ಮಾಡಿದೆ.

ವಿಕ್ರಮಸಿಂಘೆ ಹಾಗೂ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನಡುವೆ ಅಧಿಕಾರಕ್ಕಾಗಿ ನಡೆದ ಹೋರಾಟದ ಮಧ್ಯೆಯೇ ಮಹಾ ಮೈತ್ರಿಕೂಟ ರಚನೆಗೆ ಸಿದ್ಧತೆ ನಡೆದಿದೆ.

‘ಈ ವರ್ಷದ ಕೊನೆಯಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗೆ ಯುಎನ್‌ಪಿ ಮೈತ್ರಿಕೂಟ ಸ್ಪರ್ಧಿಸಲಿದೆ. ಪಾಲುದಾರ ಪಕ್ಷಗಳು ಆಗಸ್ಟ್‌ 5ಕ್ಕೆ ಮೈತ್ರಿಕೂಟ ಒಪ್ಪಂದಕ್ಕೆ ಸಹಿ ಹಾಕಲಿವೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವ ಅಕಿಲ ವಿರಾಜ್‌ ಕರಿಯವಾಸಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.