ಕಠ್ಮಂಡು: ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ನಿರ್ಣಾಯಕ ಸಭೆಯನ್ನು ಐದನೇ ಬಾರಿ ಮುಂದೂಡಲಾಗಿದೆ. ಪ್ರಧಾನಿ ಕೆ.ಪಿ.ಶರ್ಮಾ ಒಲಿ ಮತ್ತು ಮಾಜಿ ಪ್ರಧಾನಿ ಪುಷ್ಪಕಮಲ್ ದಹಲ್ ‘ಪ್ರಚಂಡ’ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಕಾಲಾವಕಾಶ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಶುಕ್ರವಾರ ನಡೆಯಬೇಕಿದ್ದ ನಿರ್ಣಾಯಕ ಸಭೆಯನ್ನು ಒಲಿ ಮತ್ತು ದಹಲ್ ಅವರ ಮನವಿ ಮೇರೆಗೆ ಭಾನುವಾರಕ್ಕೆ ಮುಂದೂಡಲಾಗಿದೆ. ಈ ಬಗ್ಗೆ ಒಲಿ ಅವರ ಮಾಧ್ಯಮ ಸಲಹೆಗಾರ ಸೂರ್ಯ ಥಾಪ ಅವರು ಟ್ವೀಟ್ ಮಾಡಿದ್ದಾರೆ. ಸ್ಥಾಯಿ ಸಮಿತಿಯ ಸಭೆ ಈ ಹಿಂದೆ ಜುಲೈ 2ರಂದು ನಡೆದಿತ್ತು. ಆದರೆ ನಾಯಕರಿಬ್ಬರ ನಡುವೆ ಭಿನ್ನಭಿಪ್ರಾಯ ಬಗೆಹರಿಯದ ಕಾರಣ ಈ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಾಯಿ ಸಮಿತಿಯ ಸದಸ್ಯ ಗಣೇಶ್ ಶಾ, ಭಾನುವಾರ ನಡೆಯಲಿರುವ ಸಭೆ ಬಹಳ ಮಹತ್ವಪೂರ್ಣವಾಗಿದೆ. ಈ ಸಭೆಯಲ್ಲಿ ಕೆ.ಪಿ ಶರ್ಮಾ ಒಲಿ ಅವರ ಭವಿಷ್ಯ ನಿರ್ಧಾರವಾಗಲಿದೆ ಎಂದಿದ್ದಾರೆ.
ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಪುಷ್ಪ ಕಮಲ್ ದಹಲ್ ‘ಪ್ರಚಂಡ’ ನೇತೃತ್ವದ ಬಣವು ಒಲಿ ವಿರುದ್ಧ ಬಂಡಾಯ ಸಾರಿದ್ದು, ಅಧಿಕಾರ ಹಂಚಿಕೆ ಕುರಿತು ನಾಯಕರಿಬ್ಬರ ನಡುವೆ ಭಿನ್ನಭಿಪ್ರಾಯಗಳು ಉಂಟಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.