ಕಠ್ಮಂಡು: ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದ ನೇಪಾಳದ ಹಿಂದಿನ ರಾಜ ಜ್ಞಾನೇಂದ್ರ ಷಾ ಮತ್ತು ಹಿಂದಿನ ರಾಣಿ ಕೋಮಲ್ ಷಾ ಅವರಿಗೆ ಕೋವಿಡ್ ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಮಂಗಳವಾರ ಮಾಧ್ಯಮವೊಂದು ವರದಿ ಮಾಡಿದೆ.
‘ಜ್ಞಾನೇಂದ್ರ ಷಾ ಮತ್ತು ಕೋಮಲ್ ಷಾ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಹರ್ ಕಿ ಪೌರಿಯಲ್ಲಿ ಪವಿತ್ರ ಸ್ನಾನ ಮಾಡಿದ್ದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಇಬ್ಬರೂ ನೇಪಾಳಕ್ಕೆ ಹಿಂತಿರುಗಿದ್ದರು’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
‘ಜ್ಞಾನೇಂದ್ರ ಮತ್ತು ಕೋಮಲ್ ಅವರಿಗೆ ಪಿಸಿಆರ್ (ಪಾಲಿಮರೇಸ್ ಚೈನ್ ರಿಯಾಕ್ಷನ್) ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ಇಬ್ಬರಿಗೂ ಕೋವಿಡ್–19 ಇರುವುದು ದೃಢಪಟ್ಟಿದೆ. ನೇಪಾಳಕ್ಕೆ ಹಿಂತಿರುಗಿದ ಇಬ್ಬರನ್ನೂ ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ನೂರಾರು ಜನರು ಸೇರಿದ್ದರು’ ಎಂದು ದಿ ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.