ಲಾಹೋರ್ (ಪಿಟಿಐ): ದೇಶದ್ರೋಹ ಆರೋಪದಡಿ ತಮ್ಮ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಮಂಡಳಿ ಗುರುವಾರ (ನ.28) ತೀರ್ಪು ಘೋಷಿಸುವುದಕ್ಕೆ ತಡೆ ನೀಡುವಂತೆ ಕೋರಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜ.ಪರ್ವೇಜ್ ಮುಷರಫ್ ಸಲ್ಲಿಸಿರುವ ಅರ್ಜಿಯನ್ನು ಇಲ್ಲಿನ ಹೈಕೋರ್ಟ್ ಪುರಸ್ಕರಿಸಿದೆ.
ಈ ಸಂಬಂಧ ನ. 28ರ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ಸೈಯದ್ ಮಜರ್ ಅಲಿ ಅಕ್ಬರ್ ನಕ್ವಿ, ಸರ್ಕಾರಕ್ಕೆ ಸೂಚಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸಹ ಅದೇ ದಿನ (ನ.28) ನ್ಯಾಯಾಲಯದಲ್ಲಿ ಹಾಜರಿರಲು ನ್ಯಾಯಮೂರ್ತಿ ನಕ್ವಿ ನಿರ್ದೇಶನ ನೀಡಿದ್ದಾರೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.
ಕುತೂಹಲಕರ ಸಂಗತಿ ಎಂದರೆ, ಮುಷರಫ್ ವಿರುದ್ಧದ ಆರೋಪ ಕುರಿತು ವಿಚಾರಣೆ ನಡೆಸಿರುವ ವಿಶೇಷ ನ್ಯಾಯಮಂಡಳಿ ನ. 28ರಂದು ತನ್ನ ತೀರ್ಪು ಪ್ರಕಟಿಸುವುದಕ್ಕೆ ತಡೆ ನೀಡುವಂತೆ ಕೋರಿ ಪಾಕಿಸ್ತಾನ ಸರ್ಕಾರ ಇಸ್ಲಾಮಾಬಾದ್ನ ಹೈಕೋರ್ಟ್ನಲ್ಲಿ ಸೋಮವಾರ ಅರ್ಜಿ ಸಲ್ಲಿಸಿದೆ.
ಅಧ್ಯಕ್ಷರಾಗಿದ್ದ ಮುಷರಫ್, 2007ರ ನವೆಂಬರ್ 3ರಂದು ತುರ್ತು ಪರಿಸ್ಥಿತಿ ಘೋಷಿಸಿದ್ದರು. ನಂತರ ಬಂದ ನವಾಜ್ ಷರೀಫ್ ನೇತೃತ್ವದ ಸರ್ಕಾರ, ಮುಷರಫ್ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ 2013ರಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. 2014ರ ಮಾರ್ಚ್ 31ರಂದು ಅವರ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.