ADVERTISEMENT

1990ರ ನಂತರ ಭಾರತದ ಬಡತನ ಅರ್ಧದಷ್ಟು ಇಳಿಕೆ: ವಿಶ್ವಬ್ಯಾಂಕ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 19:55 IST
Last Updated 16 ಅಕ್ಟೋಬರ್ 2019, 19:55 IST

ವಾಷಿಂಗ್ಟನ್‌: ಭಾರತದಲ್ಲಿನ ಬಡತನ ಪ್ರಮಾಣವು 1990ರ ನಂತರ ಅರ್ಧದಷ್ಟು ಇಳಿಕೆಯಾಗಿದೆ ಎಂದು ವಿಶ್ವಬ್ಯಾಂಕ್‌ ಹೇಳಿದೆ.

ಕಳೆದ 15 ವರ್ಷಗಳಿಂದ ಭಾರತವು ಶೇ 7ಕ್ಕಿಂತಲೂ ಹೆಚ್ಚು ಅಭಿವೃದ್ಧಿ ದರವನ್ನು ಕಾಯ್ದುಕೊಂಡಿದ್ದರಿಂದ ಈ ಫಲಿತಾಂಶ ದೊರೆತಿದೆ ಎಂದು ತಿಳಿಸಿದೆ.

ಬಡತನ ನಿವಾರಣೆ ಸೇರಿದಂತೆ ಜಗತ್ತಿನ ಅಭಿವೃದ್ಧಿಯಲ್ಲಿ ಭಾರತದ ಪಾತ್ರ ಶ್ಲಾಘನೀಯ ಎಂದು ಬಣ್ಣಿಸಿರುವ ವಿಶ್ವ ಬ್ಯಾಂಕ್‌, ಹವಾಮಾನ ಬದಲಾವಣೆ ಸೇರಿದಂತೆ ಜಾಗತಿಕ ವಿಚಾರಗಳ ನಿರ್ವಹಣೆಯಲ್ಲಿ ಭಾರತ ಪ್ರಧಾನ ಪಾತ್ರ ವಹಿಸಿದೆ ಎಂದು ತಿಳಿಸಿದೆ.

ADVERTISEMENT

ಪ್ರಸಕ್ತ ಆರ್ಥಿಕ ಅಭಿವೃದ್ಧಿ ದರ ಕಡಿಮೆ ಇದ್ದರೂ ಮುಂದಿನ ದಶಕದಲ್ಲಿ ಬಡತನ ನಿವಾರಣೆಗೆಭಾರತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದೆ.

ಸುಸ್ಥಿರ ಅಭಿವೃದ್ಧಿ ಹಾದಿಯಲ್ಲಿರುವ ಭಾರತವು ಬೃಹತ್ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಇನ್ನಷ್ಟು ಸಂಪನ್ಮೂಲ ದಕ್ಷತೆ ಸಾಧಿಸಬೇಕು.

ನಗರ ಪ್ರದೇಶಗಳ ಭೂಮಿಯನ್ನು ಸರಿಯಾಗಿ ಬಳಸಿಕೊಂಡು ಗ್ರಾಮೀಣ ಭಾಗದ ಮೇಲೆ ಒತ್ತಡ ಕಡಿಮೆಗೊಳಿಸಬೇಕು. ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಯನ್ನು ಮತ್ತಷ್ಟು ಹೆಚ್ಚಿಸಬೇಕು ಎಂಬ ಸಲಹೆ ನೀಡಿದೆ.

ಎಲ್ಲರನ್ನು ಒಳಗೊಂಡ ಅಭಿವೃದ್ಧಿಯಿಂದ ಮಾತ್ರ ಬಡತನದ ನಿವಾರಣೆ ಸಾಧ್ಯ. ಆದ್ದರಿಂದ, ಹೊಸ ಉದ್ಯೋಗ ಸೃಷ್ಟಿಸುವತ್ತ ಭಾರತ ಗಮನ ಹರಿಸಬೇಕು ಎಂದು ಹೇಳಿದೆ.

ಶಿಕ್ಷಣದಲ್ಲಿ ಲಿಂಗಾನುಪಾತದ ಅಂತರವನ್ನು ಮತ್ತಷ್ಟು ತಗ್ಗಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿರುವ ಬ್ಯಾಂಕ್‌, ಮಹಿಳಾ ಉದ್ಯೋಗಿಗಳ ಪ್ರಮಾಣ ಕಡಿಮೆ ಆಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದೆ.

**

₹ 24 ಲಕ್ಷ ಕೋಟಿ:2030ರವರೆಗೆ ಮೂಲಸೌಕರ್ಯ ಕ್ಷೇತ್ರಕ್ಕೆ ಹೂಡಿಕೆ ಮಾಡಬೇಕಾದ ವಾರ್ಷಿಕ ಮೊತ್ತ
1.3 ಕೋಟಿ:ಪ್ರತಿ ವರ್ಷ ಉದ್ಯೋಗ ಅರ್ಹತೆ ಪಡೆಯುವ ಯುವ ಜನರು
30 ಲಕ್ಷ:ಪ್ರತಿ ವರ್ಷ ಸೃಷ್ಟಿಯಾಗುವ ಹೊಸ ಉದ್ಯೋಗ
2.3 ಕೋಟಿ:ಸಮರ್ಪಕ ವಿದ್ಯುತ್‌ ಸೌಲಭ್ಯ ವಂಚಿತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.