ಕೊಲಂಬೊ: ಕಳೆದ ತಿಂಗಳು ಶ್ರೀಲಂಕಾ ಸಂಸತ್ತನ್ನು ವಿಸರ್ಜನೆ ಮಾಡಿದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಕ್ರಮ ಅಸಾಂವಿಧಾನಿಕ ಎಂದು ಇಲ್ಲಿನ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ. ಇದರಿಂದ ಸಿರಿಸೇನಾ ಅವರಿಗೆ ಭಾರಿ ಹಿನ್ನಡೆಯಾಗಿದೆ.
‘ನಾಲ್ಕೂವರೆ ವರ್ಷ ಪೂರೈಸುವವರೆಗೂ ಅಧ್ಯಕ್ಷರು ಸಂಸತ್ತನ್ನು ವಿಸರ್ಜನೆ ಮಾಡುವಂತಿಲ್ಲ’ ಎಂದು ಏಳು ಸದಸ್ಯರ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ನಿರ್ಣಾಯಕ ತೀರ್ಪು ಗುರುವಾರ ಹೊರಬೀಳುವುದು ಖಚಿತವಿದ್ದ ಕಾರಣ, ಸುಪ್ರೀಂ ಕೋರ್ಟ್ ಆವರಣದಲ್ಲಿ ಭದ್ರತೆಗಾಗಿ ವಿಶೇಷ ಕಾರ್ಯಪಡೆಯನ್ನು ನಿಯೋಜಿಸಲಾಗಿತ್ತು.
ಪ್ರಧಾನಿಯಾಗಿದ್ದ ರನಿಲ್ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ, ಅವರ ಜಾಗಕ್ಕೆ ಮಹಿಂದಾ ರಾಜಪಕ್ಸೆ ಅವರನ್ನು ಅಧ್ಯಕ್ಷರು ನೇಮಿಸಿದಾಗಿನಿಂದ ಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿತ್ತು. ಇದಾದ ನಂತರ, 225 ಸದಸ್ಯ ಬಲದ ಸಂಸತ್ತನ್ನು ಇನ್ನೂ 20 ತಿಂಗಳ ಅವಧಿ ಇದ್ದಾಗಲೇ ವಿಸರ್ಜಿಸಿ, ಜನವರಿ 5ರಂದು ಮಧ್ಯಂತರ ಚುನಾವಣೆಗೆ ಸಿರಿಸೇನಾ ಆದೇಶಿಸಿದ್ದರು. ಸರಳ ಬಹುಮತಕ್ಕಾಗಿ 113 ಸಂಸದರ ಬೆಂಬಲ ಪಡೆಯಲು ರಾಜಪಕ್ಸೆ ವಿಫಲರಾಗುವ ಸೂಚನೆ ಕಾಣುತ್ತಿದ್ದಂತೆಯೇ, ಸಂಸತ್ತಿನ ವಿಸರ್ಜನೆಗೆ ಮುಂದಾಗಿದ್ದರು. ಆದರೆ ಮತ್ತೊಂದೆಡೆ, ವಿಕ್ರಮಸಿಂಘೆ ಸಂಸತ್ತಿನಲ್ಲಿ 117 ಸಂಸದರ ಬೆಂಬಲವನ್ನು ಸಾಬೀತು ಮಾಡಿದ್ದರು.
ಸಂಸತ್ತನ್ನು ನ. 9ರಂದು ವಿಸರ್ಜಿಸಿದ ನಂತರ ಸಿರಿಸೇನಾ ವಿರುದ್ಧ ಕೋರ್ಟ್ನಲ್ಲಿ 13 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದೀಗ, ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದಾಗಿ, 2020ರ ಫೆಬ್ರುವರಿವರೆಗೆ ಸಂಸತ್ತಿಗೆ ಅವಧಿಪೂರ್ವ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ.
ನ. 13ರಂದು ಮಧ್ಯಂತರ ಆದೇಶ ನೀಡಿದ್ದ ಕೋರ್ಟ್, ಸಿರಿಸೇನಾ ಅವರ ಗೆಜೆಟ್ ಅಧಿಸೂಚನೆ ಸದ್ಯದ ಸ್ಥಿತಿಯಲ್ಲಿ ಅಕ್ರಮ ಎಂದು ಹೇಳಿತ್ತಲ್ಲದೆ, ಅವಧಿಪೂರ್ವ ಚುನಾವಣೆಗೆ ತಡೆ ನೀಡಿತ್ತು. ಈ ಆದೇಶದ ಬಳಿಕ, ಮೂವರು ಸದಸ್ಯರ ನ್ಯಾಯಪೀಠ
ವನ್ನು 7 ಸದಸ್ಯರಿಗೆ ವಿಸ್ತರಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.