ಕೊಲಂಬೊ: ‘ಶ್ರೀಲಂಕಾ ತನ್ನ ತಪ್ಪು ಮತ್ತು ವೈಫಲ್ಯಗಳನ್ನು ಸರಿಪಡಿಸಿಕೊಳ್ಳಬೇಕು. ದೇಶವಾಗಿ ಅದು ತನ್ನ ಸಾಮರ್ಥ್ಯವನ್ನು ವಿಮರ್ಶಿಸಿಕೊಳ್ಳುವ ಅಗತ್ಯವಿದೆ’ ಎಂದು ಅಲ್ಲಿನ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಶನಿವಾರ ಹೇಳಿದ್ದಾರೆ.
75ನೇ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ನಮ್ಮ ದೇಶವು ಅತ್ಯಂತ ನಿರ್ಣಾಯಕ ಮತ್ತು ಸವಾಲಿನ ಸಮಯದಲ್ಲಿ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಮಾಡುತ್ತಿದೆ. ಆದರೆ, ಒಂದು ದೇಶವಾಗಿ ನಮ್ಮ ಸಾಮರ್ಥ್ಯವನ್ನು ವಿಮರ್ಶಿಸಿಕೊಳ್ಳುವ ಮತ್ತು ನಮ್ಮ ದೋಷ ಹಾಗೂ ವೈಫಲ್ಯಗಳನ್ನು ಸರಿಪಡಿಸಿಕೊಳ್ಳುವ ಅವಕಾಶವೂ ಇದಾಗಿದೆ’ ಎಂದರು.
ವಿಶ್ವಾಸಾರ್ಹ ಪಾಲುದಾರ: ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್, ‘ಭಾರತವು ಯಾವತ್ತಿಗೂ ಶ್ರೀಲಂಕಾದ ವಿಶ್ವಾಸಾರ್ಹ ಪಾಲುದಾರ ಮತ್ತು ಸ್ನೇಹಿತ’ ಎಂದು ಹೇಳಿದ್ದಾರೆ.
ಈ ನಡುವೆ ಶ್ರೀಲಂಕಾದ ವಿರೋಧಪಕ್ಷಗಳು ಸ್ವಾತಂತ್ರ್ಯ ದಿನದ ಕಾರ್ಯಕ್ರಮವನ್ನು ಬಹಿಷ್ಕರಿಸಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.