ಕೊಲಂಬೊ: ವಿವಾದಾತ್ಮಕ ಭಯೋತ್ಪಾದನಾ ನಿಗ್ರಹ ಕಾನೂನನ್ನು ತಿದ್ದುಪಡಿ ಮಾಡಲು ಶ್ರೀಲಂಕಾ ಸರ್ಕಾರ ಸಜ್ಜಾಗಿದೆ. ಭಯೋತ್ಪಾದನೆಗೆ ಸಂಬಂಧಿಸಿದ ಶಂಕಿತ ವ್ಯಕ್ತಿಗಳನ್ನು ಯಾವುದೇ ವಿಚಾರಣೆಯಿಲ್ಲದೆ ಬಂಧಿಸುವ ಸಂಪೂರ್ಣ ಅಧಿಕಾರವನ್ನು ಈ ಕಾನೂನು ಪೊಲೀಸರಿಗೆ ನೀಡುತ್ತದೆ.
ಭಯೋತ್ಪಾದನಾ ನಿಗ್ರಹ ಕಾಯ್ದೆಗೆ (ಪಿಟಿಎ) ತಿದ್ದುಪಡಿ ತರಲಾಗುವುದು ಎಂದು ಸರ್ಕಾರ ಗುರುವಾರ ಹೊರಡಿಸಿದ ಗೆಜೆಟ್ ಅಧಿಸೂಚನೆಯೊಂದರಲ್ಲಿ ಹೇಳಿದೆ.
ಪಿಟಿಎ ಕಾಯ್ದೆಯು 1979 ರಲ್ಲಿ ಜಾರಿಗೆ ಬಂದಿದೆ. ಒಬ್ಬ ವ್ಯಕ್ತಿಯು ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವ ಶಂಕೆ ಇದ್ದಲ್ಲಿ ವಾರಂಟ್ ರಹಿತವಾಗಿ ಬಂಧನ ಮತ್ತು ಶೋಧ ಕಾರ್ಯ ನಡೆಸಲು ಕಾಯ್ದೆಯು ಪೊಲೀಸರಿಗೆ ಅಧಿಕಾರ ನೀಡುತ್ತದೆ.
ತಿದ್ದುಪಡಿ ಮಸೂದೆಯು ಹಲವಾರು ಬದಲಾವಣೆಯನ್ನು ಪ್ರಸ್ತಾಪಿಸುತ್ತದೆ. ಶಂಕಿತರು ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯ ಆಧಾರದ ಮೇಲೆ ಸುಪ್ರೀಂಕೋರ್ಟ್ ಸಂಪರ್ಕಿಸಲು ಮತ್ತು ಪರಿಹಾರವನ್ನು ಪಡೆಯಲು ಅವಕಾಶ ಕಲ್ಪಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧನದಲ್ಲಿರುವ ವ್ಯಕ್ತಿಗೆ ಕಾನೂನು ನೆರವು ಪಡೆಯಲು ತಿದ್ದುಪಡಿಯಲ್ಲಿ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.