ವಾಷಿಂಗ್ಟನ್: ಭಾರತದಲ್ಲಿ ಕೋವಿಡ್–19 ಪಿಡುಗು ಭಾರಿ ಹಾನಿಯನ್ನುಂಟು ಮಾಡುತ್ತಿದ್ದು, ಈ ಪಿಡುಗಿನಿಂದ ಸಂಭವಿಸುತ್ತಿರುವ ಸಾವು–ನೋವಿನ ವರದಿಗಳು ಭಯಾನಕ ಹಾಗೂ ಹೃದಯ ಹಿಂಡುವಂತಿವೆ ಎಂದು ಅಮೆರಿಕದ ಸರ್ಜನ್ ಜನರಲ್ ಆಗಿರುವ ಭಾರತ ಮೂಲದ ವಿವೇಕ್ ಮೂರ್ತಿ ಹೇಳಿದ್ದಾರೆ.
ಎರಡನೇ ಬಾರಿಗೆ ದೇಶದ ವೈದ್ಯಕೀಯ ಸೇವೆಯ ಅತ್ಯುನ್ನತ ಹುದ್ದೆಗೇರಿದ ಹೆಗ್ಗಳಿಕೆ ಹೊಂದಿರುವ ವಿವೇಕ್ ಮೂರ್ತಿ, ಕೋವಿಡ್ನಿಂದಾಗಿ ತಮ್ಮ ಕುಟುಂಬದ ಏಳು ಜನರನ್ನು ಕಳೆದುಕೊಂಡಿದ್ದಾರೆ.
‘ಭಾರತದಲ್ಲಿರುವ ನಮ್ಮ ಕುಟುಂಬದ ಸದಸ್ಯರೊಂದಿಗೆ ನಿತ್ಯವೂ ಮಾತನಾಡುತ್ತಿರುವೆ. ಅವರು ಬಹಳಷ್ಟು ಯಾತನೆ ಅನುಭವಿಸುತ್ತಿದ್ದಾರೆ. ಇಂಥ ಪರಿಸ್ಥಿತಿ ಇನ್ನೆಂದೂ ಬರದಿರಲಿ ಎಂದೇ ಎಲ್ಲರೂ ಪ್ರಾರ್ಥಿಸುವಂತಾಗಿದೆ’ ಎಂದು ಅವರು ಮಾಧ್ಯಮಗಳಿಗೆ ಹೇಳಿದರು.
‘ನಿತ್ಯ 3.50 ಲಕ್ಷಕ್ಕೂ ಅಧಿಕ ಜನರು ಸೋಂಕಿಗೆ ಒಳಗಾಗುತ್ತಿದ್ದು, ರೋಗಿಗಳಿಂದ ಆಸ್ಪತ್ರೆಗಳು ಭರ್ತಿಯಾಗಿವೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಆಗುತ್ತಿಲ್ಲ. ತೀವ್ರವಾಗಿ ಅಸ್ವಸ್ಥರಾದವರಿಗೆ ಆಮ್ಲಜನಕ ಪೂರೈಕೆ ಸಾಧ್ಯವಾಗುತ್ತಿಲ್ಲ. ಬಹಳ ಸಂಕಷ್ಟದ ಪರಿಸ್ಥಿತಿ ಮನೆ ಮಾಡಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.
‘ಸಂಕಷ್ಟದ ಈ ಸಮಯದಲ್ಲಿ ಭಾರತಕ್ಕೆ ಅಮೆರಿಕ ನೆರವು ನೀಡಲು ಮುಂದಾಗಿರುವುದು ಸಮಾಧಾನ ತಂದಿದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.