ಕಾಬೂಲ್: ಅಫ್ಗಾನಿಸ್ತಾನದಲ್ಲಿ ಭಾರತವು ಮಾನವೀಯ ನೆಲೆಯಲ್ಲಿ ಮಾಡಿರುವ ಕೆಲಸಗಳು ಮತ್ತು ಅಭಿವೃದ್ಧಿ ಕಾರ್ಯದ ಬಗ್ಗೆ ತಾಲಿಬಾನ್ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ, ಸೇನಾ ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ನೀಡಿದೆ.
‘ಅವರು (ಭಾರತ) ಸೇನೆಯಾಗಿ ಅಫ್ಗಾನಿಸ್ತಾನಕ್ಕೆ ಬಂದರೆ ಹಾಗೂ ಅವರ ಅಸ್ತಿತ್ವವನ್ನು ಪ್ರಕಟಪಡಿಸಿದರೆ ನಾವು ಅವರಿಗೆ ಒಳ್ಳೆಯವರಾಗಿರುವುದಿಲ್ಲ. ಅಫ್ಗಾನಿಸ್ತಾನದಲ್ಲಿ ಇತರ ರಾಷ್ಟ್ರಗಳು ಸೇನಾ ಹಸ್ತಕ್ಷೇಪ ಮಾಡಿದ್ದನ್ನು ಅವರು ನೋಡಿದ್ದಾರೆ. ಹೀಗಾಗಿ ಅದು ಅವರಿಗೆ ಮುಕ್ತ ಆಯ್ಕೆಯಾಗಿರಬಹುದು. ಆಫ್ಗನ್ ಜನರಿಗೆ, ರಾಷ್ಟ್ರೀಯ ಯೋಜನೆಗಳಿಗೆ ಅವರ ನೆರವಿಗೆ ನಮ್ಮ ಮೆಚ್ಚುಗೆಯಿದೆ’ ಎಂದು ತಾಲಿಬಾನ್ನ ಕತಾರ್ ಮೂಲದ ವಕ್ತಾರ ಸುಹೈಲ್ ಶಹೀನ್ ‘ಎಎನ್ಐ’ಗೆ ತಿಳಿಸಿದ್ದಾನೆ.
ಅಫ್ಗಾನಿಸ್ತಾನದ ದಕ್ಷಿಣ ಭಾಗವನ್ನು ದಾಟಿ ಮೂರು ಪ್ರಮುಖ ನಗರಗಳನ್ನು ತಾಲಿಬಾನ್ ಶುಕ್ರವಾರ ವಶಪಡಿಸಿಕೊಂಡಿತ್ತು. ಅಫ್ಗಾನಿಸ್ತಾನದ ಶೇ 75 ಭಾಗದ ಮೇಲೆ ತಾಲಿಬಾನ್ ಈಗಾಗಲೇ ಹಿಡಿತ ಸಾಧಿಸಿದೆ.
ಈ ಮಧ್ಯೆ, ಅಫ್ಗಾನಿಸ್ತಾನದಲ್ಲಿ ಬಲ ಪ್ರಯೋಗದ ಮೂಲಕ ರಚನೆಯಾಗುವ ಯಾವುದೇ ಸರ್ಕಾರಕ್ಕೆ ಮಾನ್ಯತೆ ನೀಡದಿರಲು ಭಾರತ, ಅಮೆರಿಕ ಹಾಗೂ ಚೀನಾ ಸೇರಿದಂತೆ 12 ರಾಷ್ಟ್ರಗಳು ನಿರ್ಧರಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.