ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
ಇಸ್ತಾಂಬುಲ್: ರಷ್ಯಾ ಮತ್ತು ಉಕ್ರೇನ್ನ ಪ್ರತಿನಿಧಿಗಳು ಮುಖಾಮುಖಿಯಾಗಿ ಸೋಮವಾರ ಎರಡನೇ ಸುತ್ತಿನ ಸಭೆ ನಡೆಸಿದ್ದರು. ಈ ಮಾತುಕತೆಯಿಂದ ಯುದ್ಧವನ್ನು ಅಂತ್ಯಗೊಳಿಸುವ ದಿಕ್ಕಿನತ್ತ ಯಾವುದೇ ಪ್ರಗತಿಯಾಗಿಲ್ಲ. ಆದರೆ, ಸೈನಿಕರ ವಿಚಾರಗಳಲ್ಲಿ ಎರಡೂ ದೇಶಗಳು ಕೆಲವು ಒಪ್ಪಂದಕ್ಕೆ ಬಂದಿವೆ.
ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಹತ್ಯೆಯಾಗಿರುವ ಎರಡೂ ದೇಶಗಳ ಸುಮಾರು 6 ಸಾವಿರ ಸೈನಿಕರ ಮೃತದೇಹಗಳನ್ನು ಆಯಾ ದೇಶಗಳಿಗೆ ರವಾನಿಸುವ ಒಪ್ಪಂದಕ್ಕೆ ಬರಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಸೈನಿಕರನ್ನು ಆಯಾ ದೇಶಗಳಿಗೆ ವಾಪಸು ಕಳುಹಿಸುವ ಬಗ್ಗೆ ಸಮಿತಿಯೊಂದನ್ನು ರಚಿಸುವ ತೀರ್ಮಾನ ಕೈಗೊಳ್ಳಲಾಗಿದೆ.
ಜೊತೆಗೆ, ಆಯಾ ದೇಶಗಳು ವಶದಲ್ಲಿ ಇಟ್ಟುಕೊಂಡಿರುವ ಸೈನಿಕರನ್ನು ವಾಪಸು ಕಳುಹಿಸುವ ಬಗ್ಗೆಯೂ ಎರಡೂ ದೇಶಗಳು ಒಪ್ಪಂದಕ್ಕೆ ಬಂದಿವೆ.
‘ಒಪ್ಪಂದಕ್ಕೆ ಬರುವುದು ಬಹಳ ಸಂಕೀರ್ಣವಾದ ವಿಚಾರ. ಯಾಕೆಂದರೆ, ಎರಡೂ ದೇಶಗಳ ನಡುವ ಅಷ್ಟೊಂದು ಭಿನ್ನಾಭಿಪ್ರಾಯಗಳಿವೆ. ಆದ್ದರಿಂದ, ತತ್ಕ್ಷಣದಲ್ಲಿಯೇ ಎಲ್ಲವಕ್ಕೂ ಪರಿಹಾರ ಸಿಕ್ಕಿಬಿಡುತ್ತದೆ ಎಂದು ಅಂದುಕೊಳ್ಳುವುದು ತಪ್ಪು’ ಎಂದು ರಷ್ಯಾದ ವಕ್ತಾರ ಡಿಮಿತ್ರಿ ಪೆಸ್ಕೊ ಮಂಗಳವಾರ ಪ್ರತಿಕ್ರಿಯಿಸಿದರು.
‘ಯುದ್ಧ ಅಂತ್ಯಗೊಳಿಸಲು ರಷ್ಯಾವು ಕೆಲವು ಷರತ್ತುಗಳನ್ನು ಮುಂದಿಟ್ಟಿದೆ. ಈ ಷರತ್ತುಗಳನ್ನು ಅಧ್ಯಯನ ಮಾಡಿ, ಪ್ರತಿಕ್ರಿಯಿಸಲು ನಮಗೆ ಒಂದು ವಾರ ಕಾಲಾವಕಾಶಬೇಕು. ಆದ್ದರಿಂದ ಜೂನ್ 20ರಿಂದ 30ರ ಒಳಗೆ ಮುಂದಿನ ಸಭೆ ನಡೆಸುವಂತೆ ಹೇಳಿದ್ದೇವೆ’ ಎಂದು ಉಕ್ರೇನ್ನ ರಕ್ಷಣಾ ಸಚಿವ ರಸ್ಟಮ್ ಉಮರಾವ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.