ವಿಶ್ವಸಂಸ್ಥೆ: ಪ್ರವಾಹಪೀಡಿತ ಅಸ್ಸಾಂ ರಾಜ್ಯದಲ್ಲಿ ಪರಿಹಾರ ಕಾರ್ಯಗಳಿಗೆ ಭಾರತ ಸರ್ಕಾರಕ್ಕೆ ಅಗತ್ಯ ಬೆಂಬಲ ನೀಡಲು ವಿಶ್ವಸಂಸ್ಥೆ ಸಿದ್ಧ ಎಂದು ವಿಶ್ವಸಂಸ್ಥೆಪ್ರಧಾನ ಕಾರ್ಯದರ್ಶಿಯ ವಕ್ತಾರರು ತಿಳಿಸಿದ್ದಾರೆ.ಅಸ್ಸಾಂನಲ್ಲಿ ಪ್ರವಾಹದಿಂದಾಗಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಲಕ್ಷಾಂತರ ಜನರು ಅತಂತ್ರರಾಗಿದ್ದಾರೆ.
ಭಾರತದ ಅಸ್ಸಾಂ ಮತ್ತು ನೆರೆಯ ನೇಪಾಳದಲ್ಲಿ ಪ್ರವಾಹದಿಂದಾಗಿ ಸುಮಾರು 40 ಲಕ್ಷ ಜನರು ಅತಂತ್ರರಾಗಿದ್ದಾರೆ ಎಂಬ ಮಾಹಿತಿಯು ವಿಶ್ವಸಂಸ್ಥೆಗೆ ಬಂದಿದೆ ಎಂದು ವಕ್ತಾರ ಸ್ಟೀಫನ್ ದುಜಾರ್ರಿಕ್ ಹೇಳಿದ್ದಾರೆ.
ಭಾರತ ಸರ್ಕಾರ ಬಯಸಿದರೆ ನೆರವು ನೀಡಲು ಸಿದ್ಧ. ಸಂಪರ್ಕ ಕೊರತೆ ಇರುವೆಡೆ ಭೂಕುಸಿತದಿಂದಾಗಿ ಜನರಿಗೆ ಸೌಲಭ್ಯ ತಲುಪಿಸುವುದೇ ದುಸ್ತರವಾಗಿದೆ. ಬಾಧಿತರಿಗೆ ನೆರವಾಗಲು ವರ್ಲ್ಡ್ ಫುಡ್ ಪ್ರೋಗ್ರಾಂ ಕಾರ್ಯಕ್ರಮ ರೂಪಿಸುತ್ತಿದೆ. ಸಂಪರ್ಕ ಕೊರತೆ ಇರುವೆಡೆ ತಲುಪಲು ಹೆಲಿಕಾಪ್ಟರ್ ಬಳಕೆಯಷ್ಟೇ ಉಳಿದ ಮಾರ್ಗ ಎಂದು ಅವರು ಹೇಳಿದ್ದಾರೆ.
ಅಸ್ಸಾಂನ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರದ (ಎಎಸ್ಡಿಎಂಎ) ಪ್ರಕಾರ, ರಾಜ್ಯದ 24 ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 24.3 ಲಕ್ಷ ಜನರು ಪ್ರವಾಹ ಪರಿಸ್ಥಿತಿಯಿಂದ ಬಾಧಿತರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.