ವಾಷಿಂಗ್ಟನ್: 2008ರ ಮುಂಬೈ ದಾಳಿಯ ಸಂಚುಕೋರರಲ್ಲಿ ಒಬ್ಬನಾಗಿ, ಅಮೆರಿಕದಲ್ಲಿ ಬಂಧಿತನಾಗಿರುವ ಉದ್ಯಮಿ ತಹಾವುರ್ ರಾಣಾನ ಜಾಮೀನು ಅರ್ಜಿಯನ್ನು ಅಮೆರಿಕದ ನ್ಯಾಯಾಲಯ ತಿರಸ್ಕರಿಸಿದೆ.
ಜಾಮೀನಿನ ಮೇಲೆ ಬಿಡುಗಡೆ ಆದರೆ ಆತ ಪರಾರಿಯಾವ ಸಾಧ್ಯತೆ ಇದೆ ಎಂದು ನ್ಯಾಯಾಲಯವು ಹೇಳಿದೆ. ಭಾರತವು ಈತನನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ಘೋಷಿಸಿದೆ.
ಪಾಕಿಸ್ತಾನ ಮೂಲದ ರಾಣಾ, ಕೆನಡಾದ ಪ್ರಜೆಯಾಗಿದ್ದು, ಷಿಕಾಗೊದಲ್ಲಿ ಉದ್ಯಮ ನಡೆಸುತ್ತಿದ್ದ. ಈತ ಮುಂಬೈ ದಾಳಿಯ ಆರೋಪಿ ಡೇವಿಡ್ ಕೋಲ್ಮನ್ ಹೆಡ್ಲಿಯ ಬಾಲ್ಯಸ್ನೇಹಿತನಾಗಿದ್ದು, ಮುಂಬೈ ದಾಳಿಯ ಸಂಚುಕೋರರಲ್ಲಿ ಒಬ್ಬನೆನಿಸಿಕೊಂಡಿದ್ದ. 59 ವರ್ಷದ ರಾಣಾನನ್ನು ಹಸ್ತಾಂತರಿಸುವಂತೆ ಭಾರತವು ಅಮೆರಿಕಕ್ಕೆ ಮನವಿ ಮಾಡಿತ್ತು. ಇದಾದ ನಂತರ ಅಮೆರಿಕವು ಈತನನ್ನು ಇತ್ತೀಚೆಗೆ ಪುನಃ ಬಂಧಿಸಿತ್ತು. ಹೆಡ್ಲಿಯು ಪ್ರಸಕ್ತ ಅಮೆರಿಕದಲ್ಲಿ 35 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ.
‘ಮುಂಬೈ ದಾಳಿಯ ಆರೋಪಿಯಾಗಿರುವ ಈತನಿಗೆ ಭಾರತದಲ್ಲಿ ಮರಣದಂಡನೆಯಾಗುವ ಸಾಧ್ಯತೆ ಇದೆ. ಈಗ ಜಾಮೀನು ನೀಡಿದರೆ, ಮರಣದಂಡನೆಯಿಂದ ತಪ್ಪಿಸಿಕೊಳ್ಳಲು ಆತ ಕೆನಡಾಗೆ ಪರಾರಿಯಾಗುವ ಸಾಧ್ಯತೆ ಇದೆ’ ಎಂದು ಕೋರ್ಟ್ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.