ವಿದೇಶಾಂಗ ಸಚಿವ ಎಸ್. ಜೈಶಂಕರ್
ಪಿಟಿಐ ಚಿತ್ರ
ವಾಷಿಂಗ್ಟನ್: ಭಾರತದ ಮೇಲೆ ಶೇ 500ರಷ್ಟು ಸುಂಕ ವಿಧಿಸಬಹುದಾದ ಅಮೆರಿಕದ ಸೆನೆಟ್ ಮುಂದೆ ಇರುವ ರಷ್ಯಾ ವಿರುದ್ಧದ ಕಠಿಣ ನಿರ್ಬಂಧ ಮಸೂದೆಗೆ ಸಂಬಂಧಿಸಿದಂತೆ ಭಾರತೀಯ ರಾಯಭಾರಿ, ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಹೇಳಿದ್ದಾರೆ.
ನಾವು ಆ ತಡೆಯನ್ನು ದಾಟಬೇಕಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, ಇಂಧನ, ಭದ್ರತೆಯ ಕುರಿತಾದ ಭಾರತದ ಕಾಳಜಿ ಮತ್ತು ಹಿತಾಸಕ್ತಿಗಳನ್ನು ಗ್ರಹಾಂ ಅವರಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ರಷ್ಯಾದ ತೈಲ ಆಮದಿನ ಹಿನ್ನೆಲೆಯಲ್ಲಿ ಶೇ 500ರಷ್ಟು ಸುಂಕ ವಿಧಿಸುವ ಅಮೆರಿಕದ ಮಸೂದೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಸೂದೆಗೆ ಸಂಬಂಧಿಸಿದಂತೆ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಜೊತೆ ನಮ್ಮ ರಾಯಭಾರಿ ಮಾತುಕತೆ ನಡೆಸುತ್ತಿದ್ದಾರೆ. ಅಮೆರಿಕ ಸಂಸತ್ತಿನಲ್ಲಿ ನಡೆಯುತ್ತಿರುವ ಬೆಳವಣಿಗೆಯು ನಮ್ಮ ಹಿತಾಸಕ್ತಿಯ ಮೇಲೆ ಪರಿಣಾಮ ಬೀರಬಹುದು ಎಂಬ ಕಳವಳವಿದೆ. ಆದ್ದರಿಂದ, ನಾವು ಸೆನೆಟರ್ ಗ್ರಹಾಂ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಇಂಧನ, ಭದ್ರತೆಯ ಕುರಿತಾದ ನಮ್ಮ ಕಾಳಜಿಗಳು ಮತ್ತು ನಮ್ಮ ಹಿತಾಸಕ್ತಿಗಳನ್ನು ಅವರಿಗೆ ತಿಳಿಸಲಾಗಿದೆ. ನಾವು ಆ ತಡೆಯನ್ನು ದಾಟಬೇಕಾಗುತ್ತದೆ’ ಎಂದಿದ್ದಾರೆ.
ರಷ್ಯಾದ ಮೇಲಿನ ಅಮೆರಿಕದ ನಿರ್ಬಂಧ ಮಸೂದೆ ಪ್ರಕಾರ, ರಷ್ಯಾದ ತೈಲ, ಅನಿಲ, ಯುರೇನಿಯಂ ಮತ್ತು ಇತರ ಉತ್ಪನ್ನಗಳನ್ನು ಖರೀದಿಸುವ ಯಾವುದೇ ರಾಷ್ಟ್ರದಿಂದ ಮಾಡಿಕೊಳ್ಳುವ ಆಮದಿನ ಮೇಲೆ ಶೇ 500ರಷ್ಟು ಸುಂಕವನ್ನು ವಿಧಿಸಲಾಗುತ್ತದೆ ಎಂದು ದಿ ಹಿಲ್ ವರದಿ ಮಾಡಿದೆ. ಈ ಮಸೂದೆಯು ಸೆನೆಟ್ನಲ್ಲಿ 80ಕ್ಕೂ ಸಂಸದರ ಬೆಂಬಲ ಹೊಂದಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಭುಗಿಲೆದ್ದ ನಂತರ, ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ಮೇಲೆ ನಿರ್ಬಂಧಗಳನ್ನು ವಿಧಿಸುತ್ತಲೇ ಇವೆ. ಆದರೂ, ಭಾರತ, ರಷ್ಯಾದ ತೈಲ ಖರೀದಿಸುವುದನ್ನು ಮುಂದುವರೆಸಿದೆ. ಭಾರತ ಮತ್ತು ಚೀನಾ ರಷ್ಯಾದಿಂದ ಶೇ 70ರಷ್ಟು ತೈಲ ಖರೀದಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.