ADVERTISEMENT

ಸರಿಯಾದ ಆಯ್ಕೆ ನಿಮ್ಮದು

ಡಾ.ಎಂ.ಎ ಜಯಚಂದ್ರ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
ಡಾ. ಎಂ. ಎ. ಜಯಚಂದ್ರ
ಡಾ. ಎಂ. ಎ. ಜಯಚಂದ್ರ   

ಮಹಾಬಲ ವಿದ್ಯಾಧರ ಮಹಾರಾಜ. ಅವನಿಗೆ ನಾಲ್ವರು ಬುದ್ಧಿವಂತ ಮಂತ್ರಿಗಳು. ಆ ನಾಲ್ವರು ನಾಲ್ಕು ರೀತಿಯ ಜೀವನ ದೃಷ್ಟಿಯನ್ನು ಹೊಂದಿದ್ದರು. ತಾವು ಏನನ್ನು ನಂಬಿದ್ದರೋ ಅದನ್ನೇ ಅರಸನಲ್ಲಿ ಅರಹುತ್ತಿದ್ದರು. ಅವರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ಕುಶಲರಾಗಿದ್ದರು. ತಾನು ಯಾವುದನ್ನು ನಂಬಬೇಕು? ಯಾವ ಜೀವನ ಶೈಲಿಯನ್ನು ಅನುಸರಿಸಬೇಕು? ಎಂಬುದು ಪ್ರಭುವಿನ ವಿವೇಚನೆಗೆ ಬಿಟ್ಟ ವಿಚಾರವಾಗಿತ್ತು. ಒಮ್ಮೆ ಮಹಾಬಲ ಆಸ್ಥಾನದಲ್ಲಿದ್ದಾಗ–

"ಒಡಲಿನಲ್ಲಿ ಜೀವ ಅನ್ನುವುದು ಇರುವುದೇ? ಅದು ಪುಣ್ಯ ಪಾಪಗಳನ್ನು ಗಳಿಸುತ್ತಿರುವುದೇ? ಅದು ಬೇರೊಂದು ಒಡಲಿನಲ್ಲಿ ತನ್ನ ಧರ್ಮದ ಕರ್ಮದ ಫಲವನ್ನು ಅನುಭವಿಸುವುದೇ? ಸತ್ತವನು ಮತ್ತೆ ಹುಟ್ಟುವನೇ? ಹುಸಿ ಕಾಣ, ಡಂಬವಿದು. ಇದನ್ನೆಲ್ಲ ನೀನು ಹೇಗೆ ನಂಬುವೆ? ಬಾಳುವುದಾದರೆ ಇಂದ್ರಿಯಗಳ ಆಸೆಯನ್ನು ಸಲ್ಲಿಸಿ, ವಸಂತಕಾಲದ ಕೋಗಿಲೆಯಂತೆ ನಲಿಯುತ್ತಿರು. ಮರುಹುಟ್ಟು ಇರುವುದನ್ನು ಕಂಡವರು ಯಾರು?"

- ಎಂದು ಒಬ್ಬ ಮಂತ್ರಿ ತನ್ನ ಜೀವನ ದೃಷ್ಟಿಯನ್ನು ವ್ಯಕ್ತಪಡಿಸಿದ. ಇನ್ನೊಬ್ಬ ಸಚಿವ, ಆತ್ಮನಿರುವುದನ್ನೇ ನಿರಾಕರಿಸಿ, ತನ್ನ ಅಭಿಪ್ರಾಯವನ್ನು ಮಂಡಿಸಿದ. ಮತ್ತೊಬ್ಬ ಅಮಾತ್ಯ ಶೂನ್ಯವಾದದ ತನ್ನ ಜೀವನ ದೃಷ್ಟಿಯನ್ನು ಪ್ರತಿಪಾದಿಸಿದ. ಈ ಸಂದರ್ಭದಲ್ಲಿ ಸ್ವಯಂಬುದ್ಧನೆಂಬ ಮಹಾಮಂತ್ರಿ ತನ್ನ ಸಮ್ಯಕ್ ಜೀವನ ದೃಷ್ಟಿಯನ್ನು ಹೀಗೆ ನಿವೇದಿಸಿದ-

ADVERTISEMENT

" ಎಲೈ ಪ್ರಭುವೇ, ನಿನ್ನ ಈ ಹೊತ್ತಿನ ವಿದ್ಯಾಧರ ಸಂಪತ್ತು, ನಿನ್ನ ಪೂರ್ವ ಭವದ ಪುಣ್ಯದ ಫಲವಾಗಿ ಪ್ರಾಪ್ತವಾಗಿದೆ. ಭವ ಎಂದರೆ ಸಂಸಾರ, ಜನ್ಮಾಂತರ. ಈ ಭವವೆನ್ನುವುದು ಸಮುದ್ರವಿದ್ದ ಹಾಗೆ. ಈಜಲು ಬಾರದವನು ಇದರಲ್ಲಿ ಮುಳುಗುತ್ತಾನೆ. ಹೀಗೆ ಮುಳುಗುತ್ತಿರುವ ಜೀವವನ್ನು ಮೇಲಕ್ಕೆತ್ತುವ ಶಕ್ತಿ ಇರುವುದು ಧರ್ಮ ಒಂದಕ್ಕೆ ಮಾತ್ರ. ಅದು ಮುಳುಗುತ್ತಿರುವ ಜೀವಗಳನ್ನು ರಕ್ಷಿಸಿ, ಮುಕ್ತಿಯೆಂಬ ದಡವನ್ನು ಸೇರಿಸುವುದು. ಈ ಮುಕ್ತಿ ಮಾರ್ಗದ ಮಧ್ಯದಲ್ಲಿ ದೊರೆಯುವ (ಮಂತ್ರಿ ಪದವಿಯಾಗಲಿ, ರಾಷ್ಟ್ರಪತಿ ಹುದ್ದೆ ಆಗಲಿ), ಭೂಪೇಂದ್ರ ದೇವೇಂದ್ರ ವೈಭವವಾಗಲಿ ಶಾಶ್ವತವಲ್ಲ. ಅದು ಧರ್ಮಾಚರಣೆಯಿಂದ ಲಭಿಸುವ ಆನುಷಂಗಿಕ (ತಾತ್ಕಾಲಿಕ) ಫಲ.

ಆದರೆ ಮುಖ್ಯಫಲ ಮೋಕ್ಷವೇ ಆಗಿದೆ. ಆ ಮೋಕ್ಷಕ್ಕೆ ಕಾರಣವಾದ ಧರ್ಮದ ಸ್ವರೂಪವನ್ನು ನೀನು ಚೆನ್ನಾಗಿ ವಿಚಾರಮಾಡಿ ತಿಳಿಯಬೇಕು. ಆ ಧರ್ಮವು ದಯೆ, ದಮ, ದಾನ, ತಪ, ಶೀಲ ಎಂಬ ಐದು ಗುಣಗಳಿಂದ ಕೂಡಿದೆ.

"ಅಹಿಂಸೆ, ಅನುಕಂಪ, ಸಹಾನುಭುತಿಯ ಭಾವವೇ ದಯೆ. ಇದೇ ಧರ್ಮದ ಮೂಲವಾಗಿದೆ. ಐದು ಇಂದ್ರಿಯಗಳನ್ನು ಮತ್ತು ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದೇ ದಮ. ಉಪಕಾರ ದೃಷ್ಟಿಯಿಂದ ಇತರರಿಗೆ ಶಕ್ತಿಯಿದ್ದಷ್ಟು ನೀಡುವುದೇ ದಾನ. ತಪದಲ್ಲಿ ಉಪವಾಸ ಮೊದಲನೆಯದಾದರೆ, ಧ್ಯಾನ ಕೊನೆಯದು. ತತ್ತ್ವಗಳನ್ನು ಸಂಕಲ್ಪ (ವ್ರತ) ಪೂರ್ವಕವಾಗಿ ಆಚರಿಸುವುದೇ ಶೀಲ. ಈ ಐದು ಗುಣಯುಕ್ತವಾದುದೇ ಧರ್ಮ. ಎಲೈ ರಾಜನೇ ಇಂಥ ಸಮ್ಯಕ್ ಧರ್ಮವನ್ನು ಆಚರಿಸು."

- ಹೀಗೆ ಲೋಕದಲ್ಲಿ ನೂರಾರು ಜೀವನ ದೃಷ್ಟಿಗಳು ನಮ್ಮ ಸುತ್ತ ಮುತ್ತ ಇವೆ. ಇವುಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ ಕೊಳ್ಳುವುದು ನಮ್ಮ ಕೈಯಲ್ಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.