– ಟಿ.ಎಸ್. ಗೊರವರ, ಗದಗ
ಎಲ್ಲ ಕಾಲಕ್ಕೂ ತಂಪೊತ್ತಿನಲ್ಲಿ ನೆನೆಯಬೇಕಾದವರಲ್ಲಿ ಬಸವಣ್ಣನೂ ಒಬ್ಬ. ಬಸವಣ್ಣ ನನ್ನೆದೆಗೆ ಇಳಿದದ್ದು ಅಪ್ಪಟ ಮಾನವೀತೆಯ, ಅಂತಃಕರಣದ ವ್ಯಕ್ತಿಯಾಗಿ. ಯಾವುದನ್ನೂ ಯಾರನ್ನೂ ಕ್ಷುಲ್ಲಕವಾಗಿ ಪರಿಭಾವಿಸದೇ ‘ಅನ್ಯರಿಗೆ ಅಸಹ್ಯ ಪಡಬೇಡ...’ ಎನ್ನುತ್ತಲೇ ಎಲ್ಲವೂ ತನ್ನದೆಂಬಂತೆ ದಯೆಯಿಟ್ಟು ಪ್ರೀತಿ ತೋರುವುದು, ಅಂತರಂಗ-ಬಹಿರಂಗ ಒಂದೇ ಆಗಿ ಬದುಕುವುದು ಅಷ್ಟು ಸುಲಭವೆಂದು ಅನಿಸುತ್ತಿಲ್ಲ. ಬಸವಣ್ಣನ ಬದುಕು, ವಚನ ಎಲ್ಲ ತಲೆಮಾರುಗಳ ಆಲೋಚನೆಯನ್ನು ತಿದ್ದುತ್ತಲೇ ಇವೆ. ಜಾತಿ ವಿನಾಶ ಹಾಗೂ ಮಹಿಳೆಯರ, ತಬ್ಬಲಿ ಸಮುದಾಯಗಳ, ಮೂಢನಂಬಿಕೆಗಳ ಬಗೆಗಿನ ಅವರ ಕ್ರಾಂತಿಕಾರಕ ನಿಲುವುಗಳು ನಮ್ಮೊಳಗನ್ನು ಯಾವತ್ತೂ ಆರದ ತಿದಿಯಂತೆ ಉರಿಸುತ್ತಲೇ ಇವೆ. ಯಾರ ಯಾರದೋ ಬೇಳೆಗೆ ಬೇಯುವ ಬೇಳೆಯಾದವರ, ಮಾತು ಮಾತಿನಲೂ ನಂಜು ಉಗುಳುವ, ನೆಮ್ಮದಿಯ ಮನಸುಗಳನು ಕದಡುವವರ... ಈ ಎಲ್ಲರೆಲ್ಲರ ಎದೆಯೊಳಗೆ ಬೆಳದಿಂಗಳು ಸುರಿಯುವ ಬಸವಣ್ಣನ ವಿಚಾರಧಾರೆ ಈ ಹೊತ್ತಿನ ತುರ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.