– ಡಾ. ಗೀತಾ ವಸಂತ, ತುಮಕೂರು
ಬಸವಣ್ಣನನ್ನು ಸಮಾಜಸುಧಾರಕ, ಸಮಾನತೆಯ ಹರಿಕಾರ, ಮೊದಲ ಪ್ರಜಾಪ್ರಭುತ್ವವಾದಿ, ಜಾತಿಪ್ರಜ್ಞೆಯನ್ನು ಕಳಚಿಕೊಂಡ ಕ್ರಾಂತಿಕಾರಿ ಎಂದೆಲ್ಲ ನೋಡುವ ಕ್ರಮವನ್ನು ನಮಗೆ ಆಧುನಿಕ ಶಿಕ್ಷಣವು ಕಲಿಸಿದೆ. ಆದರೆ ಆತ ಹತ್ತಿರಾಗುವುದು ಜೀವದೊಡನೆ ಸಂವಾದಕ್ಕಿಳಿಯುವ ಆರ್ದ್ರತೆಯಿಂದ. ನಮ್ಮೊಳಗಿಳಿದು ಅಂತರಂಗವನ್ನು ಶುದ್ಧಗೊಳಿಸುವ ಜಾಡಮಾಲಿ ಆತ. ಅವನ ವಚನಗಳಲ್ಲಿ ಲೋಕದ ಡೊಂಕ ತಿದ್ದಹೊರಡುವ ಜನನಾಯಕನ ದರ್ಪವಿಲ್ಲ. ಅಲ್ಲಿ ಸಂತನ ನಮ್ರತೆಯಿದೆ. ಅವನು ದೊಡ್ಡ ಕನಸುಗಾರ, ಮಹಾ ಬಂಡಾಯಗಾರ. ಆ ಕ್ರಾಂತಿಯ ಹಿಂದೆ ಇಡೀ ಮನುಕುಲವನ್ನು ತಬ್ಬಿಕೊಳ್ಳುವ ಪ್ರೀತಿಯನ್ನು ಗುರುತಿಸದಿದ್ದರೆ ನಮ್ಮ ಗ್ರಹಿಕೆ ಅಪೂರ್ಣವಾಗಿಬಿಡುತ್ತದೆ. ಎಲ್ಲ ಸಿದ್ಧಾಂತಗಳು ಸೋಗುಗಳಾಗಿ ಮೆರವಣಿಗೆಯಲ್ಲಿ ಮೂಲಮೂರ್ತಿಯೇ ಕಾಣೆಯಾಗುವ ಇಂದಿನ ವಿಹ್ವಲ ಸ್ಥಿತಿಯಲ್ಲಿ ಬಸವಣ್ಣ ಕಾಡುವುದು, ಅವನು ಒಳಗನ್ನು ತೊಳೆದುಕೊಳ್ಳಲು ಕಲಿಸಿದ ತಾಯಿಯಂಥವನು ಎಂಬುದಕ್ಕಾಗಿ.
ಜ್ಞಾನಿಯಾದರೂ ಅಲ್ಲಿ ಜಡಗೊಳ್ಳದ ಜಂಗಮ ಬಸವಣ್ಣ. ಅವನಲ್ಲೊಂದು ಬೆರಗುಗಣ್ಣಿನ ಮಗುವಿತ್ತು. ‘ಆಕಾಶದಿಂದತ್ತತ್ತ ನಿಮ್ಮ ಶ್ರೀಮುಕುಟ... ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ... ಅಗಮ್ಯ ಅಗೋಚರ ಲಿಂಗವೇ...’ ಎನ್ನುವಾಗ ಅವನ ಕಣ್ಣ ಹೊಳಪು ನಮ್ಮೊಳಗೂ ಮಿಂಚುವಂತೆ ಮಾಡುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.