ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ಮಹತ್ವದ ದಿನ ಹತ್ತಿರವಾಗತೊಡಗಿದೆ. ಚುನಾವಣೆಗೆ ಸಂಬಂಧಿಸಿದ ಚರ್ಚೆಗಳ ಧಾಟಿ ‘ಆದರೆ– ಹೋದರೆ’ ಎಂಬುದರ ಬದಲು ‘ಮುಂದೆ ಏನು‘ ಎಂಬುದರತ್ತ ನಿಧಾನವಾಗಿ ತಿರುಗತೊಡಗಿದೆ. ನರೇಂದ್ರ ಮೋದಿ ಅವರು ಪ್ರಧಾನಿ ಆಗುವ ಸಾಧ್ಯತೆ ದಟ್ಟವಾಗುತ್ತಲೇ ಚರ್ಚೆಗಳಲ್ಲಿ ಇಂತಹ ಬದಲಾವಣೆಗಳು ಕಾಣಿಸತೊಡಗಿವೆ.
ಮೇಲೆ ಎದ್ದಿದ್ದ ಚುನಾವಣಾ ದೂಳೆಲ್ಲ ಚದುರಿ ಶುಭ್ರ ವಾತಾವರಣ ಮೂಡುವ ಹಂತದಲ್ಲೇ ಹೊಸ ಸರ್ಕಾರ ದೇಶದ ಆರ್ಥಿಕ ಸ್ಥಿತಿಗತಿಯನ್ನು ಮೊದಲಾಗಿ ಗಣನೆಗೆ ತೆಗೆದುಕೊಳ್ಳಲೇಬೇಕು. ಆರ್ಥಿಕ ಸ್ಥಿತಿಯ ಪುನಶ್ಚೇತನಕ್ಕೆ ದಿನ ವಿಳಂಬ ಮಾಡುವಂತೆಯೇ ಇಲ್ಲ. ದಕ್ಷ ಆರ್ಥಿಕ ನಿರ್ವಹಣೆ ಎಂಬುದು ಭಾರಿ ಸವಾಲಿನ ಸಂಗತಿಯಾಗಿದ್ದು, ಅದರ ನಿರ್ವಹಣೆಗೆ ತಕ್ಷಣದಿಂದಲೇ ಕಾರ್ಯಪ್ರವೃತ್ತವಾಗಬೇಕು. ಸ್ವಿಚ್ ಅದುಮಿದ ತಕ್ಷಣ ವಿದ್ಯುತ್ ದೀಪ ಉರಿಯುವಂತೆ ಆರ್ಥಿಕತೆ ಎಂಬುದು ಎಲೆಕ್ಟ್ರಿಕ್ ಸ್ವಿಚ್ ಏನೂ ಅಲ್ಲ. ಆರ್ಥಿಕತೆ ಎಂಬುದು ಬಹಳ ಸಂಕೀರ್ಣ ಹಾಗೂ ಒಂದಕ್ಕೊಂದು ಸಂಬಂಧ ಇರುವ ವಿಷಯ.
ಜಾಗತಿಕ, ರಾಷ್ಟ್ರೀಯ ಮತ್ತು ಸ್ಥಳೀಯ ಅಂಶಗಳು ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತವೆ. ಇಂತಹ ಪ್ರಭಾವಗಳು ಬಹು ಆಯಾಮದಿಂದ ಕೂಡಿರುವುದರಿಂದ ಈ ವಿಷಯವನ್ನು ಅತಿ ತುರ್ತು ನೆಲೆಯಲ್ಲಿ ಕೈಗೆತ್ತಿಕೊಳ್ಳಲೇಬೇಕಾಗುತ್ತದೆ. ಆರ್ಥಿಕತೆ ಎಂಬುದು ಪ್ರಬಲವಾದ ಭಾವನೆಗಳಿಂದಲೇ ಮುಂದಕ್ಕೆ ಚಲಿಸುತ್ತಿರುತ್ತದೆ ಎಂಬುದನ್ನು ನಾನು ಹೇಳುತ್ತಿರುತ್ತೇನೆ. ಚುನಾವಣಾ ಫಲಿತಾಂಶ ಹೊರಬಿದ್ದ ತಕ್ಷಣ ಹಣಕಾಸು ವಿಚಾರಕ್ಕೆ ಬಹಳ ಮಹತ್ವ ಬಂದುಬಿಡುತ್ತದೆ. ಷೇರು ಮಾರುಕಟ್ಟೆ ಈಗಾಗಲೇ ಇದೇ ಭಾವನೆಯೊಂದಿಗೆ ನೂತನ ವ್ಯವಸ್ಥೆಯತ್ತ ಆಶಾಗಣ್ಣಿನಿಂದ ಎದುರು ನೋಡತೊಡಗಿದೆ.
ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವುದರತ್ತ ತಕ್ಷಣ ಗಮನ ಹರಿಸಬೇಕಿದೆ. ಜನಸಾಮಾನ್ಯರು ಅದರಲ್ಲೂ ಬಡವರ್ಗದ ಮಂದಿ ಹಣದುಬ್ಬರದಿಂದ ತತ್ತರಿಸಿ ಹೋಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಏರುಗತಿಯಲ್ಲೇ ಸಾಗಿರುವ ಆಹಾರ ಹಣದುಬ್ಬರ ಬಡವರ ಆದಾಯವೆಲ್ಲ ಕರಗಿ ಹೋಗುವಂತೆ ಮಾಡಿಬಿಟ್ಟಿದೆ. ಆರ್ಬಿಐ ಮತ್ತು ಹಣಕಾಸು ಸಚಿವಾಲಯ ಬೇಡಿಕೆ ವಿಚಾರಗಳತ್ತ ಹೆಚ್ಚಿನ ಗಮನ ಹರಿಸುತ್ತಿವೆ, ಪೂರೈಕೆ ವಿಚಾರಗಳನ್ನು ಕಡೆಗಣಿಸಿವೆ. ನಿಯಂತ್ರಣಕ್ಕೆ ಬಾರದ ಸಬ್ಸಿಡಿಗಳು ಮತ್ತು ಸರ್ಕಾರದ ಉದಾರ ಕೊಡುಗೆಗಳು ಹಣದುಬ್ಬರದ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಚುನಾವಣೆ ಕೊನೆಗೊಂಡಿರುವುದರಿಂದ ನೂತನ ಸರ್ಕಾರ ಈ ವಿಚಾರದಲ್ಲಿ ಪ್ರಾಯೋಗಿಕ ಮತ್ತು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬಹುದು. ಜನಸಾಮಾನ್ಯ (ಆಮ್ ಆದ್ಮಿ) ಈ ವಿಚಾರದಲ್ಲಿ ತುಂಬ ಸಮಯ ತಾಳ್ಮೆಯಿಂದ ಇರುವುದು ಸಾಧ್ಯವಿಲ್ಲ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹಣದುಬ್ಬರ ತಡೆಗೆ ಉತ್ತಮ ನಿರ್ವಹಣೆ ಮಾಡುವ ಭರವಸೆಯನ್ನು ನೀಡಲಾಗಿದೆ. ಅದನ್ನು ತಕ್ಷಣ ಜಾರಿಗೆ ತರಬೇಕು ಎಂದು ಜನಸಾಮಾನ್ಯರು ನಿರೀಕ್ಷಿಸಿದರೆ ಅದರಲ್ಲಿ ಅಚ್ಚರಿ ಇಲ್ಲ. ಈ ಭರವಸೆಯಂತೆಯೇ ನೂತನ ಸರ್ಕಾರ ನಡೆದುಕೊಂಡಿದ್ದೇ ಆದರೆ ಜನಸಾಮಾನ್ಯರಲ್ಲಿ ಆರಂಭದಲ್ಲೇ ಉತ್ತಮ ಅಭಿಪ್ರಾಯ ಮೂಡಿಸುವುದು ಸರ್ಕಾರಕ್ಕೆ ಸಾಧ್ಯವಿದೆ. ಮುಂದೆ ಸರ್ಕಾರ ಮುನ್ನಡೆಸುವಲ್ಲಿ ಇದು ಬಹಳ ರಚನಾತ್ಮಕ ಪರಿಣಾಮವನ್ನೂ ಬೀರುವುದು ನಿಶ್ಚಿತ.
ಉದ್ಯಮ ಸಮುದಾಯ ನೂತನ ಸರ್ಕಾರದ ಪ್ರಥಮ ನಡೆಗಳನ್ನೇ ಕಾತರದಿಂದ ನೋಡತೊಡಗಿದೆ. ಆರ್ಥಿಕ ಕ್ಷೇತ್ರದ ಹಲವಾರು ವಿಚಾರಗಳತ್ತ ಗಮನ ಹರಿಸಬೇಕಿದ್ದರೂ, ಬಡ್ಡಿ ದರಗಳತ್ತ ಅತಿ ಹೆಚ್ಚಿನ ಗಮನ ಹರಿಸಬೇಕಾಗಿದೆ. ಆರ್ಥಿಕ ಕ್ಷೇತ್ರದ ಸಾಧನೆಗಳಲ್ಲಿ ಬಡ್ಡಿ ದರ ಬಹಳ ದೊಡ್ಡ ಪ್ರಭಾವ ಬೀರುತ್ತದೆ. ನಿರಂತರವಾಗಿ ಬಡ್ಡಿ ದರ ಹೆಚ್ಚಳವಾಗಿದ್ದರಿಂದ ಕಳೆದ ಮೂರು ವರ್ಷಗಳಲ್ಲಿ ಮೂಲಸೌಲಭ್ಯ ಕ್ಷೇತ್ರದಲ್ಲಿನ ಬಂಡವಾಳ ಹೂಡಿಕೆ ಪ್ರಮಾಣ ಕಡಿಮೆಯಾಗುವಂತಾಗಿದೆ ಹಾಗೂ ಹಲವಾರು ಉದ್ಯಮಗಳು ಆರ್ಥಿಕವಾಗಿ ಲಾಭದಾಯಕವೇ ಅಲ್ಲ ಎಂಬಂತಹ ಸ್ಥಿತಿಗೆ ತಲುಪಿಬಿಟ್ಟಿವೆ.
ವಸತಿ ಮತ್ತು ಹಿಂದೆ ಬಿದ್ದಿರುವ ವಾಹನ ಕ್ಷೇತ್ರಕ್ಕೆ ತಕ್ಷಣ ಉತ್ತೇಜನ ದೊರಕಲೇಬೇಕಿದ್ದು, ಕಡಿಮೆ ಬಡ್ಡಿದರ ಖಂಡಿತ ನೆರವಿಗೆ ಬರಲಿದೆ. ಬಡ್ಡಿದರ ವಿಚಾರದಲ್ಲಿ ತಕ್ಷಣ ಸೂಕ್ತ ನಿರ್ಧಾರ ಕೈಗೊಂಡಿದ್ದೇ ಆದರೆ ಆರ್ಥಿಕ ಹಿಂಜರಿತದಿಂದ ಕಂಗೆಟ್ಟು ಹೋಗಿರುವ ಇತರ ಹಲವಾರು ಉದ್ಯಮಗಳೂ ಚೇತರಿಸಿಕೊಳ್ಳುವುದು ಸಾಧ್ಯವಿದೆ. ಇಂತಹ ಬದಲಾವಣೆಯಿಂದ ಭಾರಿ ಯಂತ್ರೋಪಕರಣಗಳು ಮತ್ತು ಗ್ರಾಹಕರ ಬಳಕೆಯ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚುವಂತಾಗುತ್ತದೆ. ಬಡ್ಡಿದರ ಕಡಿಮೆ ಮಾಡಿದರೆ ಹಣದುಬ್ಬರ ಪ್ರಮಾಣವೂ ಕಡಿಮೆಯಾಗುತ್ತದೆ. ಈ ಎಲ್ಲ ಅಂಶಗಳನ್ನೂ ಆರ್ಬಿಐ ಗಮನಿಸಿ, ನೂತನ ಸರ್ಕಾರದೊಂದಿಗೆ ಅದು ಹೆಜ್ಜೆ ಹಾಕುತ್ತದೆ ಎಂದು ನಾನು ಆಶಿಸಿದ್ದೇನೆ.
ಆರ್ಥಿಕ ಕ್ಷೇತ್ರದಲ್ಲಿ ಬಡ್ಡಿದರ ವಿಚಾರ ಬಹಳ ಮುಖ್ಯವಾಗಿರುವುದರಿಂದ ಇಲ್ಲಿ ತರುವ ಬದಲಾವಣೆಗಳಿಗೆ ಬಹಳ ಬೇಗ ಫಲಿತಾಂಶ ದೊರಕಿಬಿಡುತ್ತದೆ.
ಜನರಲ್ ಎಲೆಕ್ಟ್ರಿಕ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಜೆಫ್ ಇಮ್ಲೆಟ್ ಈಚೆಗೆ ಭಾರತಕ್ಕೆ ಬಂದಿದ್ದರು. ಜಾಗತಿಕ ಹೂಡಿಕೆದಾರರಿಗೆ ಭಾರತದ ನೂತನ ಸರ್ಕಾರ ನೀಡುವ ಸಂದೇಶದ ಬಗ್ಗೆ ಕಾತರದಿಂದ ಇರುವುದಾಗಿ ಅವರು ಹೇಳಿದ್ದರು. ಹಲವಾರು ಅಂತರರಾಷ್ಟ್ರೀಯ ಆರ್ಥಿಕ ತಜ್ಞರು ಸಹ ಇದೇ ಅಂಶವನ್ನು ಪ್ರಸ್ತಾಪಿಸಿದ್ದು, ಸರ್ಕಾರ ತೆಗೆದುಕೊಳ್ಳುವ ಪ್ರಥಮ ಹೆಜ್ಜೆಯೇ ದೇಶದ ಆರ್ಥಿಕತೆಗೆ ಬಹಳ ಮುಖ್ಯ ಎಂದು ಅವರೆಲ್ಲರೂ ಅಭಿಪ್ರಾಯಪಟ್ಟಿದ್ದಾರೆ.
ವಿದೇಶಿ ನೇರ ಹೂಡಿಕೆಯನ್ನು (ಎಫ್ಡಿಐ) ಉತ್ತೇಜಿಸುವ ನಿಟ್ಟಿನಲ್ಲಿ ನೂತನ ಸರ್ಕಾರ ಸ್ಪಷ್ಟವಾದ ಸಂದೇಶ ರವಾನಿಸಲೇಬೇಕು ಮತ್ತು ಹೂಡಿಕೆಯನ್ನು ಆಕರ್ಷಿಸುವುದಕ್ಕಾಗಿ ಈ ಹಿಂದಿನ ಸರ್ಕಾರಗಳು ಜಾರಿಗೆ ತಂದಿದ್ದ ನೀತಿಗಳನ್ನು ಸುಧಾರಿಸುವ ಕೆಲಸ ಮಾಡಬೇಕು. ಯಾವುದೇ ರೀತಿಯ ಎಫ್ಡಿಐಗೆ ಸಂಘ ಪರಿವಾರದ ಒಂದು ವಿಭಾಗ ಬಹಳವಾಗಿ ವಿರೋಧಿಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮೋದಿ ಅವರು ಅಧಿಕಾರಕ್ಕೆ ಬಂದದ್ದೇ ಆದಲ್ಲಿ ಎಫ್ಡಿಐ ತರುವ ಅವರ ಪ್ರಯತ್ನವನ್ನು ತಡೆಗಟ್ಟಲು ಸಂಘ ಪರಿವಾರದ ಈ ವಿಭಾಗ ತನ್ನೆಲ್ಲಾ ಶಕ್ತಿಯನ್ನೂ ಉಪಯೋಗಿಸುವ ಸಾಧ್ಯತೆಯೂ ಹೆಚ್ಚಿದೆ. ಹೂಡಿಕೆದಾರರು ಸದಾ ಕಿರಿಕಿರಿ ಅನುಭವಿಸುತ್ತಿರುವ ತೆರಿಗೆ ವಿಚಾರವನ್ನು ನೇರವಾಗಿಯೇ ಬಗೆಹರಿಸುವ ಪ್ರಯತ್ನ ಮಾಡುವ ವಿಚಾರ, ಕೇಂದ್ರದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ಅದಕ್ಕೆ ಅದು ಆದ್ಯತೆಯ ವಿಷಯ ಆಗಬೇಕು. ಹೂಡಿಕೆದಾರರಿಗೆ ಭ್ರಮನಿರಸನ ಉಂಟುಮಾಡುವಂತಹ ಗತಕಾಲದ ತಿದ್ದುಪಡಿಗಳನ್ನು ತರಲು ಪ್ರಯತ್ನಿಸುವುದಿಲ್ಲ ಎಂಬ ನಿಟ್ಟಿನಲ್ಲಿ ಸ್ಪಷ್ಟ ಭರವಸೆ ನೀಡಲೇಬೇಕು.
ಸುಧಾರಣೆಯ ವೇಗ ನಿಧಾನಗೊಳಿಸಿದ್ದೇ ಯುಪಿಎ 2 ಸರ್ಕಾರದ ಮೂರ್ಖತನವಾಗಿತ್ತು ಎಂಬುದನ್ನು ಚಿದಂಬರಂ ಅವರು ಒಪ್ಪಿಕೊಂಡಿದ್ದಾರೆ. ಅವರ ಈ ಹೇಳಿಕೆಯಿಂದ ಹೊರಹೊಮ್ಮುವ ಸಂಕೇತವನ್ನು ನೂತನ ಸರ್ಕಾರ ಗಮನಿಸಬೇಕು ಮತ್ತು ಆರ್ಥಿಕ ಪುನಶ್ಚೇತನದ ಪೆಡಲನ್ನು ತಕ್ಷಣ ತುಳಿಯಬೇಕು. ಆರ್ಥಿಕ ಸುಧಾರಣೆಯಲ್ಲಿ ಅತ್ಯಂತ ಪ್ರಮುಖ ವಿಷಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ). ಜಿಎಸ್ಟಿ ವಿಚಾರದಲ್ಲಿ ಅಪಾರ ಕೆಲಸಗಳು ಈಗಾಗಲೇ ನಡೆದಿದ್ದು, ಒಕ್ಕೂಟದ ನಿಜವಾದ ಅರ್ಥದಲ್ಲಿ ಎಲ್ಲಾ ರಾಜ್ಯಗಳನ್ನು ಈ ವಿಚಾರದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಂದಿನ ಸರ್ಕಾರಕ್ಕೆ ಆದ್ಯತೆಯ ಸಂಗತಿಯಾಗಬೇಕು.
ಬಹಳ ಕಾಲದಿಂದ ನನೆಗುದಿಗೆ ಬಿದ್ದಿರುವ ಈ ಸುಧಾರಣಾ ಕ್ರಮವನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನಿಸಬೇಕು. ಜಿಎಸ್ಟಿ ವಿಚಾರದಲ್ಲಿ ರಾಜ್ಯಗಳು ವ್ಯಕ್ತಪಡಿಸುವ ಆತಂಕಗಳಿಗೆಲ್ಲ ಸಮರ್ಪಕ ಉತ್ತರ ಕೊಟ್ಟು ಮತ್ತು ರಾಜ್ಯಗಳಿಗೆ ಯಾವುದೇ ಆತಂಕ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುವ ಮೂಲಕ ಯಾವುದೇ ರಾಜ್ಯವೂ ಜಿಎಸ್ಟಿಗೆ ವಿರೋಧ ವ್ಯಕ್ತಪಡಿಸದಂತೆ ನೋಡಿಕೊಳ್ಳಬೇಕು. ಇಂತಹ ಕ್ರಮವು ದೇಶೀಯವಾಗಿ ಮಾತ್ರವಲ್ಲ ವಿದೇಶಿ ಹೂಡಿಕೆದಾರರಿಗೂ ಉತ್ತಮ ಸಂದೇಶ ರವಾನಿಸುತ್ತದೆ. ಸಾಮಾನ್ಯವಾಗಿ ಇಂತಹ ಕ್ರಮಗಳನ್ನು ಪ್ರಕಟಿಸುವುದು ಬಜೆಟ್ ಮಂಡನೆ ಸಮಯದಲ್ಲಿ. ಆದರೆ ಸಮಯ ತಿನ್ನುವ ಇಂತಹ ಸುಧಾರಣಾ ಕ್ರಮಗಳಿಗಾಗಿ ಮುಂದಿನ ಸರ್ಕಾರ ಬಜೆಟ್ ವರೆಗೆ ಕಾಯಬಾರದು. ಸರ್ಕಾರದ ಯೋಜನೆಗಳನ್ನು ಸಾಧ್ಯವಾದಷ್ಟು ಬೇಗ ಸಿಗುವ ಅವಕಾಶದಲ್ಲೇ ಪ್ರಕಟಿಸಬೇಕು.
ನೂತನ ಆರ್ಥಿಕ ನೀತಿಯನ್ನು ನಿರ್ಧರಿಸುವಾಗ ಇತರ ವಿಚಾರಗಳಿಗಿಂತ ಮುಖ್ಯವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿ ವಿಷಯವೇ ಪ್ರಧಾನ ಅಂಶವಾಗಿರಬೇಕು. ಯುವಜನತೆಯ ನಿರುದ್ಯೋಗ ಎಂಬ ಟೈಂ ಬಾಂಬ್ ಅನ್ನು ತಕ್ಷಣ ನಿಷ್ಕ್ರಿಯಗೊಳಿಸಬೇಕು. ಇದೊಂದು ಸಮಯ ತಿನ್ನುವ ಪ್ರಕ್ರಿಯೆಯಾಗಿದ್ದರೂ, ತಕ್ಷಣದ ಆರಂಭವನ್ನಂತೂ ಮಾಡಲೇಬೇಕು.
ದೀರ್ಘ ಕಾಲದ ನಿಷ್ಕ್ರಿಯತೆಯಿಂದಾಗಿ ತುಕ್ಕು ಹಿಡಿದಂತಿರುವ ಅದೇ ಹಿಂದಿನ ಅಧಿಕಾರಶಾಹಿಯನ್ನೇ ನೂತನ ಸರ್ಕಾರ ಅವಲಂಬಿಸಬೇಕಿದೆ. ಹೀಗಾಗಿ ಅಧಿಕಾರಶಾಹಿಯನ್ನು ಚುರುಕುಗೊಳಿಸಿ ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ಪ್ರಯತ್ನ ಮಾಡಬೇಕು. ಕೆಲಸ ಮಾಡುವ ಅಧಿಕಾರಿಗಳನ್ನು ಒಟ್ಟುಗೂಡಿಸಿಕೊಂಡು, ಹಿಮ್ಮುಖವಾಗಿ ಚಲಿಸತೊಡಗಿರುವ ಆರ್ಥಿಕತೆಯನ್ನು ಸರಿಯಾದ ದಾರಿಗೆ ತಂದು ನಿಲ್ಲಿಸುವ ಹೊಣೆಗಾರಿಕೆ ಮುಂದೆ ಅಧಿಕಾರ ವಹಿಸಿಕೊಳ್ಳಲಿರುವ ಸರ್ಕಾರದ ಮೇಲಿದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.