ನನ್ನಾಳವನ್ನು ನೀರು ನುಂಗಿಕೊಂಡಿದೆಯೆಂದು
ಬಾವಿ ಬೊಬ್ಬಿಟ್ಟಿದೆ.
ಗಲಗಲ ಹರಿವ ನನ್ನನ್ನು ಆಳದ ಸೆರೆಗಟ್ಟಿದೆಯೆಂದು
ಬಾವಿಯ ನೀರು ತಳ್ಳಾಡುತಿದೆ.
ನೀರು - ಆಳಗಳೆರಡನ್ನೂ
ನಿಭಾಯಿಸುವ ಸಮಚಿತ್ತದ ತೂಕದಲ್ಲಿ
ಆಮೆ ನಿಶ್ಚಲ ಚಲನೆಯಲ್ಲಿ ಈಸುತ್ತಿದೆ ಅಥವ
ಆಮೆಯನ್ನೇ ಸೀಮೆಯಾಗಿಸಿದ
ಧಿಮಾಕಿನಲ್ಲಿ
ಆಳವೇ ನೀರಾಗಿ ತುಳುಕುತ್ತಿದೆ.
ನೀರು, ಆಳ, ಆಮೆಗಳೆಲ್ಲವೂ
ಒಂದೇ ಸಮಬಿಂದುವಿನಲ್ಲಿ ನಿಂತಿವೆ
ಅಸಮ ವಿನ್ಯಾಸದ ಗಾರುಡಿಯಲ್ಲಿ
ಬಾವಿ ಆಳವಲ್ಲ
ನೀರು ನಿಶ್ಚಲವಲ್ಲ
ಆಮೆ ಅಸೀಮವಲ್ಲ
ಬಿಡಿಸಲಾರದ ಒಗಟು
ಬಿಡಿಸಿದರೂ ಒಗಟು
ತೇಲುವ ಆಮೆ ನಿರಾತಂಕ
ನನ್ನ ಮನವದರ ಸರೀಕ.
= ಲಕ್ಷ್ಮೀಪತಿ ಕೋಲಾರ .
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.