ADVERTISEMENT

ಆತ್ಮಕ್ಕೆ ಸ್ನಾನ–ಬಸವಣ್ಣನ ವಚನ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST
ಬಿಂದು ಮಾಲಿನಿ
ಬಿಂದು ಮಾಲಿನಿ   

– ಬಿಂದು ಮಾಲಿನಿ, ಬೆಂಗಳೂರು

ಬಸವಣ್ಣನಲ್ಲಿ ನನಗೆ ಅಚ್ಚರಿ ಮೂಡಿಸುವುದು ಆತನ ಶಿವಭಕ್ತಿಯ ಪರಿ ಹಾಗೂ ಸಮರ್ಪಣಾ ಮನೋಭಾವ. ‘ಶಿವ ಎಂದರೆ ಪ್ರೀತಿ’ ಎಂಬ ಮೂಲತತ್ವವನ್ನು ಅವರು ಅರ್ಥೈಸಿಕೊಂಡ ಹಾಗೂ ಆ ಪ್ರೀತಿಯನ್ನೇ ಸರ್ವರಿಗೂ ಸಾರಿದ ರೀತಿಯೇ ಸುಂದರ. ಬಸವಣ್ಣ ಈ ಲೋಕಕ್ಕೆ ಅತೀ ಅಗತ್ಯವಾದ ಕ್ಷಮೆಯ ಭಾವ ಬಿತ್ತಿದರು.

ಬಸವಣ್ಣನ ವಚನವನ್ನು ಹಾಡುವುದೆಂದರೆ ನನಗೆ ನಮ್ಮ ಮೂಲಕ್ಕೆ ಮರಳಿ ಹೋಗುವಂಥ ಅನುಭವ. ನಾವು ಏನನ್ನು ಅರ್ಥೈಸಿಕೊಳ್ಳಬೇಕೋ, ಏನನ್ನು ಅನುಭವಿಸಬೇಕೋ ಅದನ್ನು ತಮ್ಮ ಸರಳ ಪದಗಳ ಮೂಲಕ ಬಾಣದಂತೆ ನೇರ ಎದೆಗೆ ನಾಟಿಸಿದರು. ಅವರ ವಚನ ಹಾಡುತ್ತಿದ್ದರೆ ಧ್ಯಾನ ಮಾಡಿದಂತೆ ಅನ್ನಿಸುತ್ತದೆ. ಆ ಕ್ಷಣಕ್ಕೆ ಎದೆಯಲ್ಲಿ ಸಂಚಲನವಾಗುತ್ತದೆ. ಹಾಡು ಮುಗಿದ ನಂತರವೂ ಅದರ ಸಾರ ನಮ್ಮ ಸುತ್ತ ಸುಳಿಯುತ್ತಲೇ ಇರುತ್ತದೆ. ಬಸವಣ್ಣ ನನಗೆ ಮುಖ್ಯ ಅನ್ನಿಸುವುದು, ಜೀವನದ ಎಲ್ಲಾ ಘಟ್ಟದಲ್ಲೂ ಎಂಥ ಪರಿಸ್ಥಿತಿಯಲ್ಲೂ ಯಾವುದೂ ನಮ್ಮದಲ್ಲ ಎಂದುಕೊಂಡು ಮುಂದೆ ಹೋಗಲು ಹಾಗೂ ಆ ಸ್ಥಿತಪ್ರಜ್ಞತೆಯನ್ನು ಮನಗಾಣಿಸಲು ಅನುವು ಮಾಡಿಕೊಡುವ ಅನುಭವದ ನುಡಿಗಳಿಂದ. ಈಗಿನ ಕಾಲಕ್ಕೆ ತಕ್ಕಂತೆ ಹೇಳಬೇಕೆಂದರೆ, ಅವರ ವಚನಗಳು, ನಿಜ ಜೀವನಕ್ಕೆ ‘ಹೆಲ್ಪ್‌ ಡೆಸ್ಕ್‌’ ಇದ್ದಂತೆ.

ADVERTISEMENT

‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂಬ ಅವರ ಒಂದೇ ಸಾಲು ಸಾಕು - ಜೀವನವೆಂಬುದೇ ಒಂದು ಚಲನೆ, ಬದಲಾವಣೆ, ಅವೆಲ್ಲವನ್ನೂ ಅರಗಿಸಿಕೊಂಡು ನಡೆಯುತ್ತ ಇರುವುದಷ್ಟೇ ನಮ್ಮ ಕೆಲಸ ಎಂಬ ಸತ್ಯವನ್ನು ಅರಿತು ಮುಂದಡಿಯಿಡಲು ಬೇಕಾದ ಸ್ಫೂರ್ತಿಯನ್ನು ಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.