
‘ಬಂತಿದೋ ಕ್ರಾಂತಿ... ಆಯಿತಿದೋ ನವೆಂಬರ್ ಕ್ರಾಂತಿ...’ ಬೆಕ್ಕಣ್ಣ ಭಲೇ ಸುಶ್ರಾವ್ಯವಾಗಿ ಅಗದಿ ಭಯಂಕರ ಹುರುಪಿನಿಂದ ಹಾಡುತ್ತಿತ್ತು.
‘ಎಲ್ಲಿ ಕ್ರಾಂತಿಯಾತಲೇ? ಇಲ್ಲಂತೂ ಏನೂ ಆಗಿಲ್ಲ... ಸಿದ್ದೂ ಅಂಕಲ್ ಕುರ್ಚಿ ಅಲುಗಾಡಿಲ್ಲ’ ಎಂದೆ.
‘ಬಿಹಾರದಲ್ಲಿ ಕ್ರಾಂತಿ! ನಿಮೋ ಸುನಾಮಿವಳಗೆ ಎಲ್ಲಾರೂ ಥರಥರ ಕೊಚ್ಚಿಕೊಂಡು ಹೋದ್ರು. ಕಾಂಗಿಗಳಂತೂ ಇನ್ನು ಅಂಗಡಿ ಮುಚ್ಚಿ ಮನ್ಯಾಗೆ ಕೂರೂದೆ’ ಎನ್ನುತ್ತ ಬೆಕ್ಕಣ್ಣ ಮೀಸೆ ತಿರುವಿತು.
‘ಅದೇನೋ ಎಕ್ಸಿಟ್ ಪೋಲ್, ಮಣ್ಣುಮಸಿ ಅಂತೆಲ್ಲ ಮಾಡತಾರಲ್ಲ ಎಲ್ಲ ಬೊಗಳೆ... ಎಲ್ಲರಿಗೂ ಒಳಗಿಂದೊಳಗೇ ಗೊತ್ತಿರತೈತಿ ಗೆಲ್ಲೋ ಕುದುರಿ ಯಾವುದು ಅಂತ!’
‘ನಿತೀಶ್ ಅಂಕಲ್ಲಿಗೆ ಪಲ್ಟೂರಾಮ್ ಅಂತಿದ್ದರಲ್ಲ... ಈಗ ಎಲ್ಲರಿಗೂ ಗೊತ್ತಾಗೈತಿ ಅಂವಾ ಖರೇ ಅಂದ್ರ ಸುಶಾಸನ ಬಾಬು ಅದಾನ ಅಂತ’ ಬೆಕ್ಕಣ್ಣ ಅಭಿಮಾನದಿಂದ ಹೇಳಿತು.
‘ಮಹಾಘಟಬಂಧನ್ ಅಂತ ಕೂಡಿದ ಪಕ್ಷಗಳು ಮಹಾವಿಸ್ಫೋಟದ ಪ್ರಹಸನ ನಡಸ್ಯಾರೆ. ಅಲ್ಲಿಯ ಶ್ರೀಸಾಮಾನ್ಯರಿಗೆ ಲಾಲೂ ಅಜ್ಜನ ಜಂಗಲ್ ರಾಜ್ ವಾಪಸು ಬಂದ್ರೆ ಅಂತ ಭಯವಾಗಿ ನಿಮೋ ಮಂತ್ರ ಪಠಿಸ್ಯಾರೆ ಅಷ್ಟೆ’ ಎಂದೆ.
‘ಇನ್ನು ಬಿಹಾರ ಏನಿದ್ದರೂ ಅಭಿವೃದ್ಧಿ ರಾಜ್! ಮಹಿಳಾ ಶಕ್ತಿರಾಜ್!’ ಬೆಕ್ಕಣ್ಣ ಉದ್ಗರಿಸಿತು.
‘ಕರ್ನಾಟಕದಾಗೆ ಹೆಣ್ಣುಮಕ್ಕಳಿಗೆ ಗೃಹಲಕ್ಷ್ಮಿ, ಪುಕ್ಕಟೆ ಬಸ್ ಪ್ರಯಾಣ ಕೊಟ್ಟು ರಾಜ್ಯದ ಬೊಕ್ಕಸ ತೂತು ಬಿದ್ದೈತಿ ಅಂತ ಕಮಲಕ್ಕನ ಮಂದಿ ಗೊಳೋ ಅಂತ ಅಳತಿದ್ದಾರೆ. ಅದೇ ಬಿಹಾರದಾಗೆ ಚುನಾವಣೆಗೆ ಎರಡೇ ತಿಂಗಳಿದ್ದಾಗ ಸ್ವಉದ್ಯೋಗ ಮಾಡ್ರಿ ಅಂತ ಹೆಣ್ಣುಮಕ್ಕಳಿಗೆ ಹತ್ತು ಸಾವಿರ ರೂಪಾಯಿ ಕೊಟ್ಟಾಗ ಹೆಂಗ ಬಾಯಿ ಮುಚ್ಚಿಕೊಂಡಿದ್ರು’ ಎಂದೆ.
‘ಚುನಾವಣೆ ಅಂದ್ರ ಇಂಥಾ ಹೂಟ ಹೂಡಲೇಬೇಕು! ನಿಮೋ=ನಮೋ=ಬಿಹಾರ=ಅಭಿವೃದ್ಧಿ ಅನ್ನೋ ಸಮೀಕರಣವನ್ನು ನಮ್ ಮೋದಿಮಾಮಾರು ಪ್ರೂವ್ ಮಾಡ್ಯಾರೆ. ಇನ್ನು ಇದೇ ಸಮೀಕರಣ ಇಡೀ ದೇಶಕ್ಕೂ ಅನ್ವಯವಾಗತೈತಿ!’ ಬೆಕ್ಕಣ್ಣ ಕಣಿ ಹೇಳಿ ನನ್ನ ಬಾಯಿ ಮುಚ್ಚಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.