ಚುರುಮುರಿ: ಎಲ್ಲೆಲ್ಲೂ ಗುಂಡಿ!
‘ನನ್ನ ಮಗ ಬೆಳಿಗ್ಗೆ ಕ್ಯಾಮೆರಾ ಹಿಡಿದುಕೊಂಡು ಹೊರಗೆ ಹೋದ…’, ತಿಂಗಳೇಶನ ಮಾತಿನಲ್ಲಿ ಪುತ್ರನ ಬಗ್ಗೆ ದೂರು ಇತ್ತೋ, ಹೆಮ್ಮೆ ಇತ್ತೋ ಗೊತ್ತಾಗಲಿಲ್ಲ.
‘ಸೂರ್ಯೋದಯದ ಸೀನು ಸೆರೆ ಹಿಡಿಯಲು ಹೋಗಿರ್ತಾನೆ’.
‘ಅಪ್ಪನಿಗೆ ಕ್ಯಾಮೆರಾ ತೋರಿಸಿ ಹೊಸಕೋಟೆ ಬಿರಿಯಾನಿ ಬಾರಿಸಲು ಹೋಗಿರಬಹುದು…’
ಬೈಟು ಬಳಗದವರು ಸಿಪ್ಪು ಹೀರುತ್ತಾ ಹೇಳಿದರು. ಕಪ್ಪೊಳಗೆ ಅರ್ಧ ಕಾಫಿ, ಕಣ್ಣೊಳಗೆ ‘ಕಪ್ಪು ನಮ್ಮದೇ’ ಎಂಬ ಗರ್ವ! ‘ಎಲ್ಲೆಲ್ಲೂ ಗುಂಡಿ ಫೋಟೊ ತೆಗೆಯಲು
ಹೋಗಿರಬಹುದಲ್ಲವೇ…?’
‘ಅಯ್ಯೋ… ಬೆಂಗಳೂರಿನ ರಸ್ತೆಗುಂಡಿಗಳ ಕಥೆ ಒತ್ತಟ್ಟಿಗಿರಲಿ, ಎಷ್ಟೋ ಕೋಟಿ ತೆರಿಗೆ ಹಣ ತಿಂದು ಅವು ಮುಚ್ಚಿಕೊಳ್ಳುತ್ತವೆ. ರಾಜಕಾರಣಿಗಳು ತಮ್ಮ ಎದುರಾಳಿ
ಗಳನ್ನು ಬೀಳಿಸಲು ತೋಡುವ ಗುಂಡಿಗಳು ಒಂದಾ ಎರಡಾ…’
‘ಅದಕ್ಕೆಂದೇ ನಮ್ಮ ಬಂಡೆಕುಮಾರ, ಹೈಕಮಾಂಡಿನ ಅಶ್ವಶಕ್ತಿಗಿಂತ ಲೋ–ಕಮಾಂಡಿನ ಜನಶಕ್ತಿ ಮಿಗಿಲು ಎಂದು ಸೈಕಲ್ ಏರಿದ್ದಾರೆ’.
‘ವಿಧಾನಸೌಧದ ಗುಂಡಿಗಳಿಲ್ಲದ ಆವರಣದಲ್ಲಿ ಸೈಕಲ್ ತುಳಿಯೋದು ಅದ್ಯಾವ ದೊಡ್ಡ ಸಾಹಸ…?’
‘ವಿಧಾನಸೌಧದ ರಸ್ತೆಯಲ್ಲಿ ತೋಡಿದ ಗುಂಡಿಗಳು ಮಾಮೂಲು ರಸ್ತೆಗುಂಡಿಗಳಂತೆ ಕಣ್ಣಿಗೆ ಕಾಣುವುದಿಲ್ಲ, ಕ್ಯಾಮೆರಾ ಕ್ಲಿಕ್ಕಿಗೂ ಸಿಕ್ಕುವುದಿಲ್ಲ. ಅವುಗಳಿಗೆ ಯಾರನ್ನು ಎಲ್ಲಿ ಯಾವಾಗ ಹೇಗೆ ಕೆಡವಬೇಕೆಂಬ ಮರ್ಮ ತಿಳಿದಿರುತ್ತದೆ’.
‘ಹೌದು… ಬೀಳಿಸುವ ಗುಂಡಿ ಯಾವ ರೂಪದಲ್ಲೂ ಎದುರಾಗಬಹುದು. ಕೈಬೀಸುತ್ತಾ ವಿಧಾನಸೌಧ ಸುತ್ತ ಪೆಡಲ್ ತುಳಿದ ಬಂಡೆಕುಮಾರ ಇನ್ನೇನು ಮೆಟ್ಟಿಲ ಮೇಲೆ ಕಾಲಿಟ್ಟು ನಿಲ್ಲಬೇಕು ಎನ್ನುವಾಗ ಕುಸಿಯಲಿಲ್ಲವೇ?’
‘ಕೆಲವೊಮ್ಮೆ ತಾವು ತೋಡಿದ ಗುಂಡಿಯಲ್ಲಿ ತಾವೇ ಬೀಳುವುದುಂಟು, ಲೋಕಾಯುಕ್ತ ಎಸ್.ಪಿ. ಬಿದ್ದಂತೆ’.
‘ಸಾಹಿತಿಗಳ ಸರ್ವನಾಶಕ್ಕೆ ಕೈಗೊಂಡಿರುವ ಮಹಾಕಾಳಿ ಹೋಮದಲ್ಲಿ ಗೋಚರ–ಅಗೋಚರ ಗುಂಡಿಗಳ ವಿನಾಶವನ್ನೂ ಸೇರಿಸಬಹುದೇ…?’ ತಿಂಗಳೇಶ ಮುಗಿಸಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.