‘ಸಾ, ಜನ ಯಾಕೆ ಹಿಂಗೆ ‘ದುಬೈಗೆ ಹೋತಿನಿ, ದುಬೈಗೆ ಹೋತಿನಿ’ ಅಂತ ನೆರೆಹೊಂಡತರೋ ಕಾಣೆ. ದುಬೈನಲ್ಲಿ ಚಿನ್ನ ಕಡಮೆ ರೇಟಿಗೆ ಸಿಕ್ತದಂತೆ ಅಂತ ಕುಣಕಂದು ಹೋದ ನನ್ನ ಭಾವನೆಂಟ ನೂರು ಗ್ರಾಂ ಚಿನ್ನ ತಕ್ಕಬಂದು ಇಮಾನ ನಿಲ್ದಾಣದೇಲಿ ತಾರಾಮಾರ ದಂಡ ಕಟ್ಟಿದ’ ಅಂತ ನನ್ನ ಅನುಭವ ಹೇಳಿದೆ.
‘ಸುಂಕ ಯಾಮಾರಿಸಿ ಚಿನ್ನ ತರದು ಮಾಯಾಜಿಂಕೆಗಳಿಗೆ ಮಾತ್ರ ಸಾಧ್ಯ ಕಲಾ. ಮಾಯಾಮೃಗಗಳು ಸೂತ್ರ ಹೆಣೆದು ಕಾಸೂ ಕೊಟ್ಟು ದುಬೈಗೆ ಕಳುಗುಸ್ತವೆ’ ಅಂತ ಒಗಟು ಹಾಕಿದರು.
‘ಮಾಯಾಮೃಗ ಅಂದರಲ್ಲಾ ಹಂಗದ್ರೇನು ಸಾ?’ ನನ್ನ ಅಜ್ಞಾನ ಪ್ರದರ್ಶನ ಮಾಡಿದೆ.
‘ಯಾರ ಕಣ್ಣಿಗೂ ಕಾಣದೆ
ತೆರೆಮರೆಯಲ್ಲಿರೋ ಫೇಕು ಮರ್ಯಾದಸ್ಥರೇ ಮಾಯಾಮೃಗಗಳು. ಸುಂಕದಕಟ್ಟೆಗೆ ಬಂದು ಮಾಯಾಮೃಗಗಳ ಹೆಸರು ಹೇಳಿದೇಟಿಗೆ ಇಮಾನ ನಿಲ್ದಾಣದಲ್ಲಿರೋ ಬೇ-ಇಮಾನಿಗಳು ಚಿನ್ನದ ಜಿಂಕೆಗಳನ್ನ ಮರ್ಯಾದೆಯಿಂದ ವಿಐಪಿ ಗೇಟು ದಾಟಿಸಿ ಹೋಯ್ತರೆ ಅಂದ್ರೆ ನೀನೆ ತಿಳಕ’ ಅಂತಂದ್ರು.
‘ಚಿನ್ನದ ಜಿಂಕೆಗಳು ಸಿಗೇಬಿದ್ರೂ ಬಾಯಿಬುಟ್ಟು ಯಾರಿಗೆ ವಿಲೇವಾರಿ ಅಂತ ಹೇಳಂಗಿಲ್ಲ. ‘ನಾನು ಸುಮ್ಮಗೆ ಹೋಯ್ತಾಬತ್ತಾ ಇರತೀನಿ. ನಾನು ಚಿನ್ನ ತಂದೇ ಇಲ್ಲ’ ಅಂತ ಲೈ ಡ್ರಾಮಾ ಆಡಬೇಕು ಅಲ್ಲುವರಾ?’
‘ದುಬೈನಿಂದ ಚಿನ್ನವ ಇಲ್ಲಿಗೆ ಹಾರಿಸ್ಕಂದು ಬಂದ್ರೆ ಕೇಜಿಗೆ 12 ಲಕ್ಸ ರೂಪಾಯಿ ಫಾಯದೆ. ಅಂದ್ರೆ ಹತ್ತು ಕೇಜಿಗೆ ಕೋಟಿ ಲಾಭ ಆದದಂತೆ. ದಿಟವಾಗಿ ಮಾಯಾಮೃಗಾಲಜಿ ವ್ಯವಸ್ಥಿತ ವೈಜ್ಞಾನಿಕ ಉದ್ಯಮವೇ ಸೈ ಕಲಾ’.
‘ವಿಜ್ಞಾನ ಅಲ್ಲ ಸಾ. ಚಿನ್ನದ ಬಿಸ್ಕತ್ತುಗಳನ್ನೆಲ್ಲಾ ಕಾಣದಂಗೆ ಸೊಂಟಪಟ್ಟೀಲಿ ಅವಿಸಿಟ್ಕಂದು ಪಾರಾಗಿ ಬರೋ ಹುನ್ನಾರದ ಚೌರ್ಯವಿದ್ಯೆ ಆಗಿರೋದ್ರಿಂದ ಇದು ಕಲೆಯೇ ಸರಿ’.
‘ಚಿನ್ನ ತರೋದು ವಿಜ್ಞಾನವೂ ಹೌದು, ಕಲೆಯೂ ಹೌದು. ಕಾಸು ಮಾತ್ರ ನಮ್ಮ ತಲೆ ಮೇಲೇ ಕಣಿರ್ಲಾ’ ಅಂತಂದ ಯಂಟಪ್ಪಣ್ಣನ ಕೊಂಕುಸ್ಥಾಪನೆಯನ್ನು ದುಸರಾ ಮಾತಿಲ್ಲದೇ ಒಪ್ಪಿಕೊಂಡೆವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.