‘ಏಯ್, ಮಾರಪ್ಪನೋರು ತೋಟ ಎನ್ಕ್ರೋಚ್ ಮಾಡ್ಕಂಡವ್ರೆ ಅಂತ ಭಾರಿ ಭಾರಿ ಸುದ್ದಿಯಾಗೈತಲ್ಲ’ ಎಂದ ಗುದ್ಲಿಂಗ ಹರಟೆಕಟ್ಟೇಲಿ.
‘ಅದೆಲ್ಲಾ ಸೇಡಿನ್ ರಾಜಕೀಯ ಅನ್ನೋದು ಮುಖಕ್ಕೇ ರಾಚೋ ಅಂಗೆ ಕಾಣ್ತಿದೆ ಅಂತ ಮಾರಪ್ಪ ನೋರೇ ಯೋಳಿಲ್ವಾ?’ ಕೇಳಿದ ಮಾಲಿಂಗ.
‘ಅದೂ ನಿಜಾನೇಯ! ಈಗ ದೊಡ್ ದೊಡ್ ಮೈದಾನದಾಗೆ ಸಮಾವೇಶ ಮಾಡಕಿಲ್ವಾ? ಅಂಗೇ ಯಾವ್ದೋ ಸರ್ಕಾರಿ ಜಮೀನಾಗೆ ಸಮಾವೇಶನೋ ವಿಜಯೋತ್ಸವನೋ ಮಾಡಿರ್ತಾರೆ. ಆಗ ಅಭಿಮಾನಿಗಳು ಬೇಲಿ ಹಾಕಿ ಫ್ಲೆಕ್ಸ್ ಕಟ್ಟಿ ಓಗಿರ್ತಾರೆ. ಕಾರ್ಯಕರ್ತರು ನೊಂದ್ಕತಾರೆ ಅಂತ ಅಂಗೇ ಬುಟ್ಟಿರ್ತಾರಪ್ಪ, ಅದ್ನೇ ಎನ್ಕ್ರೋಚ್ ಅನ್ನಕ್ಕಾಯ್ತದಾ?’
‘ಕರೆಕ್ಟಾಗಿ ಯೋಳ್ದೆ ಕಣ್ಲಾ. ಅವರ್ ಎಲೆನಾಗೇ ಹನಿಟ್ರಾಪ್ ಜೇನ್ನೊಣ ಬಿದ್ದದೆ, ಇಲ್ಲಿ ಗೆದ್ದಲು ಹುಡುಕಕ್ಕೆ ಬಂದವ್ರೆ!’ ಎಂದ ಕಲ್ಲೇಶಿ.
‘ಅದಕ್ಕೂ ಇದಕ್ಕೂ ಏನ್ಲಾ ಸಂಬಂಧ?’
‘ಅದೂ ಒಂಥರಾ ಎನ್ಕ್ರೋಚೇ ಕಣ್ಲಾ. ಸಿನಿಮಾದೋರ ಕಾಸ್ಟಿಂಗ್ ಕೌಚ್ ತರ ಇದೊಂದು ಊಸ್ಟಿಂಗ್ ಕೌಚ್! ಅಂದ್ರೆ ಮುಖಕ್ಕೆ ಹನಿಟ್ರಾಪ್ ಮುಖವಾಡ ಕವುಚಿ ಅಧಿಕಾರದಿಂದ ಕೆಳಗಿಳಿಸೋ ಪ್ಲಾನು, ಇದು ಪೊಲಿಟಿಕಲ್ ಎನ್ಕ್ರೋಚ್. ಇದು ಪಕ್ಷದೊಳಗಿನೋರೇ ಕ್ಯಾಚ್ ಹಾಕಕ್ಕೆ ನೋಡಿದ್ದಾ ಇಲ್ಲ ಆಚೆ ಕಡೆಯೋರು ಮ್ಯಾಚ್ ಆಡಕ್ಕೆ ನೋಡಿದ್ದಾ ಅಂತ ಗೊತ್ತಾಯ್ತಿಲ್ಲ’.
‘ರಾಜಕೀಯದೋರೇ ಅಂಗೆ! ತಮ್ಮ ಬುಡಕ್ಕೆ ಬಂದಾಗ ಒಳಗೊಳಗೇ ಪ್ಯಾಚ್ ಆಕ್ಕಂಬುಡ್ತಾರೆ’.
‘ಇದೆಲ್ಲಾ ಬಿಡಿ, ಕಾಲ ಕಾಲೆಳೀತೈತೆ ಅಂತಿದ್ರು. ಈಗ ನೋಡು ಪ್ರೋಟೋಕಾಲೂ ಕಾಲ್ ಎಳೀತೈತೆ’.
‘ಊ ಕಣ್ಲಾ! ಡಿಜಿಪಿ ಸಾಹೇಬ್ರ ಕುತ್ತಿಗೆಗೂ ಬಂದದೆ. ಅದ್ಕೇ ಹೇಳೋದು ಕೆಟ್ರೆ ಪ್ರೋಟೋಕಾಲು, ಮಕ್ಕಳ ಪಾಪದಲ್ಲಿ ದೊಡ್ಡವರಿಗೂ ಇರುತ್ತೆ ಪಾಲು ಅಂತ’.
‘ಇದೂ ಒಂತರಾ ಪವರ್ ಎನ್ಕ್ರೋಚೇ ಕಣ್ರಲಾ. ತಮಗಿದ್ದ ಅಧಿಕಾರನ ಒತ್ತುವರಿ ಮಾಡ್ಕಂಡಿರಾದು. ಈಗ ದೊಡ್ ಮನುಷ್ಯರಿಗೂ ಚೆಕಿಂಗ್ ಪೇಚು!’
‘ಏನೇ ಮಾಡುದ್ರೂ ಮತ್ತೆ ಮತ್ತೆ ಬೌಂಡರಿ ಎನ್ಕ್ರೋಚ್ ಮಾಡ್ಕಂಡು ನುಸುಳೋ ಕಾಕ್ರೋಚ್ಗಳು ಇದ್ದೇ ಇರುತ್ವೆ’ ಎಂದ ಪರ್ಮೇಶಿ. ಎಲ್ಲಾ ಹೌದ್ಹೌದು ಎಂದು ತಲೆಯಾಡಿಸಿ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.