ADVERTISEMENT

ಚುರುಮುರಿ | ಕ್ರೇಟರ್ ಬೆಂಗಳೂರು

ಲಿಂಗರಾಜು ಡಿ.ಎಸ್
Published 26 ಮೇ 2025, 23:30 IST
Last Updated 26 ಮೇ 2025, 23:30 IST
   

ತುರೇಮಣೆ ಮೊಮ್ಮಗ ‘ರೈನ್ ರೈನ್ ಕಂ ಹಿಯರ್’ ಅಂತ ಹಾಡಿಕ್ಯತ್ತಾ ಕೂತುದ್ದ. ‘ಅಲ್ಲ ಕಲಾ ಮಗ, ರೈನ್ ರೈನ್ ಗೋ ಅವೇ ಅಂತ ಅಲ್ವೇನ್ಲಾ?’ ಅಂತ ತಿದ್ದಿದೆ.

‘ಮಾಮ, ಕೆರೆ ಒಳಗಿತ್ತಲ್ಲ ನಮ್ಮ ಫ್ಲಾಟು ನೀರಲ್ಲಿ ಮುಣುಗೋಗ್ಯದೆ. ಅದುಕ್ಕೆ ಇಲ್ಲಿಗೆ ಬಂದುದವಿ. ಜೋರು ಮಳೆ ಹೂದ್ರೆ ಸ್ಕೂಲಿಗೆ ರಜಾ ಸಿಕ್ತದಲ್ಲಾ ಅದುಕ್ಕೇ ರೈನ್ ರೈನ್ ಕಂ ಹಿಯರ್ ಅಂತ ಹೇಳ್ತುದನಿ’ ಅಂತಂದ.

‘ಮಳೆ ಬಂದ್ರೆ ವಾಟರ್ ಬೆಂಗಳೂರು ಆಯ್ತದಲ್ಲಾ ಅದಕ್ಕೇನು ಮಾಡಮು. ನಿನ್ನ ಐಡಿಯ ಹೇಳು’ ಅಂತ ಪ್ರೋತ್ಸಾಹಿಸಿದೆ.

ADVERTISEMENT

‘ಚಿನ್ನಸ್ವಾಮಿ ಸ್ಟೇಡಿಯಮ್ಮಲ್ಲಿ ಮಳೆ ಬಂದ್ರೂ ಆಟ ನಿಲ್ಲದಂಗೆ ಸಬ್-ಏರ್ ಡ್ರೈನೇಜ್ ಸಿಸ್ಟಂ ಮಾಡ್ಯವುರಲ್ಲ, ಹಂಗೆ ಬಿದ್ದ ನೀರು ರೋಡಲ್ಲೇ ಇಂಗಿ ಹೋಗಂಗೆ ಮಾಡಬಕು’ ಹುಡುಗ ರಾಜಕಾರಣಿ ಥರಾ ಮಾತಾಡಿದ.

‘ಅಲ್ಲ ಸಾ, ಚಂದ್ರಲೋಕದ ಕ್ರೇಟರ್ ಇದ್ದಂಗವೆ ಬೆಂಗಳೂರು ಗುಂಡಿಗಳು. ಜನದ ಸೇವೆ ಮಾಡಕ್ಕೆ ಅಂತ್ಲೇ ಬಿಬಿಎಂಪಿಗೆ ವಕ್ಕರಿಸಿಕ್ಯಂದಿರೋ ಅಧಿಕಾರಿಗಳಿಗೆ ಗುಂಡಿಗಳಿಲ್ಲದಿದ್ರೆ ಹೊಟ್ಟೆಪಾಡು ಯಂಗೆ ಆತದೆ? ಸಬ್-ಏರ್ ಸಿಸ್ಟಂ ಹಾಕಿ ರೋಡಿಗೆ ಅಲಂಕಾರ ಮಾಡಿಕ್ಯಂದು ಕೂಕಣಕೆ ಇದೇನು ಮೇಕಪ್ ಕೆಟ್ಟೋತಾ?’ ತುರೇಮಣೆಗೆ ಕೇಳಿದೆ.

‘ರೋಡಿಗೆ ಸಬ್-ಏರ್ ಹಾಕದು ಕ್ರೇಟರ್ ಬೆಂಗಳೂರಿಗೆ ಮೇಕಪ್ ಫೌಂಡೇಶನ್ ಕನೋ. ಕಸ ತಗುದು ಕ್ಲೆನ್ಸಿಂಗ್, ನೀರು ಒಣಗಿಸಿ ಮಾಯಿಶ್ಚರೈಸ್ ಮಾಡಿ, ಗುಂಡಿಗೆಲ್ಲಾ ಪ್ರೈಮರ್ ಹಾಕಿ, ಕುಮಾರಣ್ಣ ಅಂದಂಗೆ ರೋಡಿಗೆಲ್ಲಾ ತಗಡು ಹಾಸಿದ ಮ್ಯಾಲೆ ಮೇಕಪ್ ಪೂರ್ತಿಯಾಗಿ ಬೆಂಗಳೂರು ಸಿಂಗಪುರ ಆತದೆ. ಆಮೇಲೆ ರೋಡೆಲ್ಲಾ ತಮನ್ನಾನ ಕೆನ್ನೆ ಇದ್ದಂಗೆ ನೈಸಾಗಿರತವೆ’ ಯಂಟಪ್ಪಣ್ಣ ಖುಷಿಯಾಯ್ತು.

‘ಅಣೈ, ರೋಡಲ್ಲೋಗುವಾಗ ‘ಸ್ಕೂಟಿಯ ಮೇಲೇ ಕುಂಟ ಕಿರುನಗೆ, ರೋಡು ತುಂಬಾ ಗುಂಡಿ ಸಂಪಿಗೆ, ಏನು ಕಸಿವಿಸಿ, ಏರಿ ಮೈಬಿಸಿ, ಈ ಬಗೆ ಹೊಸ ಬಗೆ’ ಅಂತ ಹಾಡಕ್ಕಾಗಕುಲ್ವಲ್ಲಾ’ ಎಂದು ಕೊರಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.