‘ದುಬ್ಬೀರ, ಈ ಚಂಡಮಾರುತಗಳಿಗೆ ಹೆಸರು ಯಾರಿಡ್ತಾರಲೆ?’ ಗುಡ್ಡೆ ಕೇಳಿದ.
‘ಏನೋಪ್ಪ ಗೊತ್ತಿಲ್ಲ...’ ಎಂದ ದುಬ್ಬೀರ.
‘ಲೇಯ್, ಅದು ಯಾರಾದ್ರು ಇಡ್ಲಿ, ಹಾಸನ ಕಾಂಗ್ರೆಸ್ ಸಮಾವೇಶಕ್ಕೆ ಏನು ಹೆಸರಿಟ್ರು ಅದ್ನ ಹೇಳ್ರಿ ಮೊದ್ಲು’ ತೆಪರೇಸಿ ಕೇಳಿದ.
‘ಅದು ಸ್ವಾಭಿಮಾನಿ ಜನಕಲ್ಯಾಣ ಕಾಂಗ್ರೆಸ್ ಸಮಾವೇಶ ಅಂತ ಆತಂತೆ...’
‘ಅಷ್ಟುದ್ದನಾ?’
‘ಮತ್ತೆ ಎಲ್ಲರ್ನೂ ಸಮಾಧಾನ ಮಾಡ್ಬೇಕಲ್ಲಪ?’ ಕೊಟ್ರೇಶಿ ನಕ್ಕ.
‘ಅಲ್ಲ, ಈ ಹೆಸರುಗಳಿಗಿಂತ ಅಡ್ಡ ಹೆಸರೇ ಬಾಳ ಫೇಮಸ್ ನೋಡು, ರಾಜಾಹುಲಿ, ಟಗರು, ಬಂಡೆ, ಬ್ರದರ್... ಯಾರು ಅಂತ ಹೇಳಾದೇ ಬ್ಯಾಡ, ಟಕ್ ಅಂತ ಗೊತ್ತಾಗಿಬಿಡ್ತಾವು...’
‘ಕರೆಕ್ಟ್, ಹಂಗೇ ಕೆಲ ಹೆಂಡ್ತೀದೀರು ತಮ್ಮ ಗಂಡಂದಿರಿಗೆ ‘ತೆಲಿನೋವು’ ಅಂತ ಹೆಸರಿಟ್ಟಿದ್ರಂತೆ. ಗೆಳತೀರ ಜತಿ ಫೋನಲ್ಲಿ ಮಾತಾಡುವಾಗ ‘ಏನೇ ತೆಲಿನೋವು ಹೋತಾ?’ ಅಂತ ಕೇಳಿದ್ರೆ ಅತ್ತಕಡಿಂದ ‘ಇಲ್ಲ ಕಣೆ ಇನ್ನೂ ಇಲ್ಲೇ ಕೂತಿದೆ’ ಅಂತ ಜೋಕ್ ಮಾಡ್ತಿದ್ರಂತೆ’.
‘ಅದು ಹಳೇ ಜೋಕ್ ಕಣಲೆ, ಕೆಲ ಮಕ್ಕಳು ತಮ್ಮ ಅಪ್ಪಂದಿರಿಗೆ ‘ಕಿರಿಕ್ ಪಾರ್ಟಿ’ ಅಂತ ಹೆಸರಿಟ್ಟಿದಾರಂತೆ, ಅದು ಗೊತ್ತಾ?’ ದುಬ್ಬೀರ ಕೇಳಿದ.
‘ಒಳ್ಳೆ ಕತೆ’ ಎಂದ ತೆಪರೇಸಿ, ಅದಿರ್ಲಿ ಡೆಲ್ಲೀಲಿ ಯತ್ನಾಳ ಚಂಡಮಾರುತ ತಣ್ಣಗಾದಂಗೈತಿ?’ ಎಂದ.
‘ಹೈಕಮಾಂಡ್ ಒತ್ತಡ... ವಾಯುಭಾರ ಕುಸಿತ ಕಮ್ಮಿಯಾಗಿರಬೇಕು...’ ಗುಡ್ಡೆ ನಕ್ಕ.
‘ಈ ಸಮುದ್ರದ ಮ್ಯಾಗಿನ ಚಂಡಮಾರುತ ಬಿಡ್ರಲೆ, ಅಡುಗಿ ಮನಿ ಒಳಗಿನ ಚಂಡಮಾರುತನ ಹೆಂಗೆ ತಣ್ಣಗೆ ಮಾಡಬೇಕು ಅದ್ನ ಹೇಳ್ರಿ’ ಎಂದ ಕೊಟ್ರೇಶಿ.
‘ಅದು ಬಾಳ ಈಸಿ, ಅಡುಗಿ ಮನೇಲಿ ಚಂಡಮಾರುತ ಏಳ್ತಿದ್ದಂಗೆ ಪಿಟಿಕ್ಕನ್ನದೆ ಬಾತ್ ರೂಂಗೆ ಹೋಗಿ ಕದ ಹಾಕ್ಕಂಡ್ರೆ ಮುಗೀತು, ಅದು ಸ್ವಲ್ಪ ಹೊತ್ತು ಹಾರ್ಯಾಡಿ ತಂತಾನೇ ತಣ್ಣಗಾಗ್ತತಿ’ ಎಂದ ದುಬ್ಬೀರ. ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.