ADVERTISEMENT

ಚುರುಮುರಿ: ಚುರುಮುರಿ ಗೋಷ್ಠಿ- ರಾಜಕೀಯ ವಿಡಂಬನೆ

ಸುಮಂಗಲಾ
Published 3 ಅಕ್ಟೋಬರ್ 2022, 0:30 IST
Last Updated 3 ಅಕ್ಟೋಬರ್ 2022, 0:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

‘ಏ ನೋಡಿಲ್ಲಿ... ನಾವು ಮಧ್ಯಮ ವರ್ಗದ ಮಂದಿ, ಮರ್ಸಿಡಿಸ್ ಬೆಂಜ್ ಕಾರು ಖರೀದಿ ಮಾಡೂದು ನನಗೂ ಸಾಧ್ಯವಿಲ್ಲ ಅಂತ ಗಡ್ಕರಿ ಮಾಮಾ ಹೇಳ್ಯಾನ. ಅಷ್ಟ್ ದೊಡ್ಡ ಮಂತ್ರಿಗೇ ಮರ್ಸಿಡಿಸ್ ತಗಳಾಕೆ ಆಗಂಗಿಲ್ಲ ಅಂದ್ರೆ ಅದೆಷ್ಟ್ ತುಟ್ಟಿ ಅಂತ’ ಬೆಕ್ಕಣ್ಣ ಸುದ್ದಿ ತೋರಿಸುತ್ತ ಲೊಚಗುಟ್ಟಿತು.

‘ಅಲ್ಲಲೇ... ಮೂರು ವರ್ಷದ ಕೆಳಗೆ ಚುನಾವಣೆ ಟೈಮಿನಾಗೆ ನಿಮ್ಮ ಗಡ್ಕರಿ ಮಾಮಾ ತನ್ನ ಆಸ್ತಿ ಸುಮಾರು 25 ಕೋಟಿ ಅಂತ ಡಿಕ್ಲೇರ್ ಮಾಡಿದ್ರು. ಕೋಟಿಗಟ್ಟಲೆ ರೊಕ್ಕ ಇರೋ ಅವರೇ ನಾವ್ ಮಧ್ಯಮ ವರ್ಗದ ಮಂದಿ ಅಂದ್ರ ನಮ್ಮಂಥಾ ಖರೇಖರೇ ಮಧ್ಯಮ ವರ್ಗದ ಮಂದಿ ಕಥಿ ಏನು?’ ನಾನೂ ಯೋಚನೆಗೆ ಬಿದ್ದೆ.

‘ನೀವು ಶ್ರೀಸಾಮಾನ್ಯ ವರ್ಗದಾಗೆ ಬರ್ತೀರೇಳು. ನಿಮ್ಮದು ಒಂಥರಾ ಸ್ಪೆಶಲ್ ಕೆಟಗರಿ’ ಎಂದು ಬೆಕ್ಕಣ್ಣ ನನ್ನನ್ನೇ ಸಮಾಧಾನಿಸಿತು.

ADVERTISEMENT

‘ಅದ್ಸರಿ... ಅದೇನೋ ಸಾಹಿತಿಗಳಲ್ಲಿ ಎರಡು ವರ್ಗ ಐತೆ ಅಂತ ಬೊಮ್ಮಾಯಿ ಅಂಕಲ್ಲು ಹೇಳ್ಯಾರ. ನಾನು ನೀನು ಸೇರಿ ಈ ಚುರುಮುರಿ ಬರೀತೀವಲ್ಲ, ನಾವು ಯಾವ ವರ್ಗ?’ ಬೆಕ್ಕಣ್ಣ ಪ್ರಶ್ನೆಯಿಟ್ಟಿತು.

‘ನಿಮ್ಮ ಅಂಕಲ್ಲು ಯಾವ ವರ್ಗ ಹೇಳ್ಯಾರೋ ಗೊತ್ತಿಲ್ಲ. ಆದರೆ ನಾವು ಅದ್ಯಾವ ವರ್ಗದಾಗೂ ಬರಂಗಿಲ್ಲ, ನಾವು ಶ್ರೀಸಾಮಾನ್ಯ ಸಾಹಿತಿಗಳು ಕಣಲೇ’.

‘ಹಂಗಾರೆ ದಸರಾ ಕವಿಗೋಷ್ಠಿಗೆ ನಮ್ಮನ್ನ ಯಾವತ್ತಿಗೂ ಕರೆಯಂಗೇ ಇಲ್ಲೇನು?’ ಬೆಕ್ಕಣ್ಣ ಬಲು ಹತಾಶೆಯಿಂದ ಕೇಳಿತು.

‘ಅದ್ ಕವಿಗೋಷ್ಠಿ... ಕವನ ಓದತಾರ. ಹಿಂತಾವೆಲ್ಲ ಓದಂಗಿಲ್ಲ ಅಲ್ಲಿ. ನಮಗೊಂದು ಬ್ಯಾರೆ ಚುರುಮುರಿ ಗೋಷ್ಠಿನೇ ಮಾಡಬೇಕಷ್ಟೆ’ ಎಂದೆ.

‘ಬರೀ ವಣವಣ ಗೋಷ್ಠಿ ಮಾಡಿದ್ರ ಯಾರೂ ಬರಂಗಿಲ್ಲ. ಎಷ್ಟ್ ಥರ ಖಾರದ ಚುರುಮುರಿ ಬರೀತೀರೊ, ಅಷ್ಟ್ ಥರದ ಚುರುಮುರಿ ಚೂಡಾನೂ ತಿನ್ನಾಕೆ ಇಟ್ಟರೆ ಅಷ್ಟೇ ಮಂದಿ ಬರತಾರ. ಬ್ಯಾರೆಬ್ಯಾರೆ ಥರದ ಚುರುಮುರಿ ವಗ್ಗರಣೆ ಹಾಕೂದನ್ನಾರೂ ಕಲಿಯೂಣು ನಾವು’ ಬೆಕ್ಕಣ್ಣ ಹೊಸ ಯೋಜನೆ ಮುಂದಿಟ್ಟಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.