‘ಈಗ ರಾಜಕಾರಣಿಗಳಿಗೆ ಗ್ರಹಚಾರ ಕೆಟ್ಟಿದೆಯಂತೆ. ಮಾನಹಾನಿ, ಶತ್ರು ಕಾಟ ಹೆಚ್ಚಾಗಿ ತೇಜೋವಧೆಯಿಂದ ಬೀದಿ ಒದೆವರೆಗೂ ಅಪಾಯವಿದೆ ಅಂತ ಬೆಳಿಗ್ಗೆ ಟಿ.ವಿ ಗುರೂಜಿ ಹೇಳಿದರು, ನೀವು ಹುಷಾರಾಗಿರಿ...’ ನಾಯಕರಿಗೆ ಷುಗರ್ಲೆಸ್ ಕಾಫಿ ತಂದುಕೊಟ್ಟ ಪತ್ನಿ ತಾವು ಷುಗರ್ ಬೆರೆಸಿಕೊಂಡರು.
‘ಎಲೆಕ್ಷನ್ ಟೈಮಿನಲ್ಲಿ ರಾಜಕಾರಣಿಗಳ ಗ್ರಹಗತಿ ಏರುಪೇರಾಗುವುದು ಸಹಜ’ ಅಂದ್ರು ನಾಯಕರು.
‘ಹಾಗಂತ ಎಚ್ಚರ ತಪ್ಪಬೇಡಿ, ಮಾತಿನ ಮೇಲೆ ಹಿಡಿತ, ಮೈಮೇಲೆ ಪ್ರಜ್ಞೆ ಇರಲಿ. ಅದರಲ್ಲೂ ಜಾಲತಾಣದ ಬಗ್ಗೆ ಜಾಗೃತರಾಗಿರಿ. ಸಾಂಕ್ರಾಮಿಕ ರೋಗಕ್ಕಿಂತ ಸಾಮಾಜಿಕ ಜಾಲ ಅಪಾಯಕಾರಿ. ಜಾಲ ಜಾಡ್ಯಕ್ಕೆ ಮದ್ದಿಲ್ಲ. ಮೊನ್ನೆ ನೀವು ಗಣಪತಿ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡಿ ಸೊಂಟ ಉಳುಕಿಸಿಕೊಂಡಿದ್ದು ವೈರಲ್ ಆಗಿ ಜನ ಟೀಕೆ ಮಾಡಿಕೊಂಡು ಕೇಕೆ ಹಾಕುತ್ತಿದ್ದಾರೆ. ಈ ವಯಸ್ಸಿನಲ್ಲಿ ಅಂಥಾ ಕುಣಿತ ಬೇಕಿತ್ತಾ?’
ನಾಯಕರು ಕಾಫಿ ಹೀರಿದರು.
‘ರಾಷ್ಟ್ರ ನಾಯಕರೆದುರು ನೀವು ಮಾತನಾಡಿದ ಕೆಟ್ಟ ಇಂಗ್ಲಿಷ್ ಜಾಲತಾಣದಲ್ಲಿ ನಗೆಪಾಟಲಾಗಿದೆ. ಇಂಗ್ಲಿಷ್ ಕ್ರೇಜ್ ಬಿಟ್ಟುಬಿಡಿ... ಕ್ಷೇತ್ರದಲ್ಲಿ ಮೂರುಕಾಸಿನ ಕೆಲಸ ಮಾಡಿಲ್ಲ ಅಂತ ದಬಾಯಿಸಿದ್ದ ಸಾಮಾನ್ಯ ಮತದಾರನ ಮೇಲೆ ನೀವು ಕೈ ಮಾಡಿದ್ದು ದೊಡ್ಡ ಅಪರಾಧವಾಗಿ ವೈರಲ್ಜನ ನಿಮ್ಮ ಜನ್ಮ ಜಾಲಾಡಿಸುತ್ತಿದ್ದಾರೆ’.
‘ಬೈದವರಿಗೂ ಬೈಯ್ಯಬಾರದಾ?’ ಕೇಳಿದರು.
‘ಬೇಡ. ಎಲೆಕ್ಷನ್ ಮುಗಿಯೋವರೆಗೂ ಬೈಯ್ಯೋರು ಬೈಯ್ಯಲಿ, ನೀವು ತಿರುಗಿಸಿ ಬೈಯ್ಯದೆ ಮಾನ, ಮೌನ ಕಾಪಾಡಿಕೊಳ್ಳಿ, ಎಲೆಕ್ಷನ್ ಗೆದ್ದಮೇಲೆ ವರಸೆ ತೋರಿಸಿದರಾಯ್ತು...’ ಪತ್ನಿ ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.