
ಚುರುಮುರಿ: ಮನುಷ್ಯತ್ವದ ಸಂಕಲ್ಪ..!
‘ತಿರುಪತಿಯ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಭಕ್ತರು ತಾಸುಗಟ್ಟಲೆ ಕಾಯತ್ತಾರೆ... ಅಷ್ಟೆಲ್ಲ ಭದ್ರತೆ ಇರತೈತಿ... ಅಂತಾದ್ರಾಗೆ ಈ ಕುಡುಕ ಅದ್ಹೆಂಗೆ ಎಲ್ಲರ ಕಣ್ಣಿಗೆ ಮಣ್ಣೆರಚಿ ಗೋವಿಂದರಾಯ ದೇವಾಲಯದ ಗೋಪುರ ಏರಿದ!’ ಬೆಕ್ಕಣ್ಣ ಸುದ್ದಿ ಓದುತ್ತ ಉದ್ಗರಿಸಿತು.
‘ಕುಡಿದ ಮತ್ತಿನಲ್ಲಿಯೂ ಅಂವಾ ಕಾಲು ಜಾರದೇ ಅಷ್ಟೆತ್ತರದ ಗೋಪುರ ಏರ್ಯಾನೆ ಅಂದರೆ ಅದವನ ಹೊಸ ವರ್ಷದ ಸಂಕಲ್ಪ ಆಗಿರಬಕು’ ಎಂದು ನಾನು ನಕ್ಕೆ.
‘ಕಳ್ಳತನದಿಂದ ಗೋಪುರ ಏರಿದರೂ, ಕುಡುಕನೇ ಆದರೂ, ನನ್ನ ಭಕ್ತನೇ ತಾನೆ, ಅವನ ರಕ್ಷಣೆ ಮಾಡಣ ಅಂತ ಪಾಪದ ದೇವರೂ ಸಂಕಲ್ಪ ಮಾಡಿರಬಕು’ ಎನ್ನುತ್ತ ಬೆಕ್ಕಣ್ಣ ಮುಸಿಮುಸಿ ನಕ್ಕಿತು.
‘ಯಾರ್ಯಾರು ಏನೇನು ಹೊಸವರ್ಷದ ಸಂಕಲ್ಪ ಮಾಡ್ಯಾರೋ ಯಾರಿಗೆ ಗೊತ್ತು... ಟ್ರಂಪಣ್ಣನಂತೂ ಈ ಸಲ ನೊಬೆಲ್ ಶಾಂತಿ ಪ್ರಶಸ್ತಿ ತಗಳ್ಳಲೇ ಬೇಕಂತ ಸಂಕಲ್ಪ ಮಾಡಿರಬೌದು.’
‘ಶಾಂತಿ ಪ್ರಶಸ್ತಿಗೆ ಮೊದಲನೇ ಹೆಜ್ಜೆ ಅಂತ ಅಂವಾ ವೆನೆಜುವೆಲಾ ಮೇಲೆ ದಾಳಿ ಮಾಡಿ, ಅಲ್ಲಿಯ ಅಧ್ಯಕ್ಷರನ್ನೇ ಸೆರೆ ಹಿಡಿದಾನೆ!’
‘ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲಿನ ಯುದ್ಧ ನಿಲ್ಲಿಸಂಗಿಲ್ಲ ಅಂತ ಸಂಕಲ್ಪ ಮಾಡಿರಬೌದು. ಪ್ಯಾಲೆಸ್ಟೀನ್ ಹಂತಹಂತವಾಗಿ ನಾಶ ಮಾಡೂದು ಇಸ್ರೇಲಿನ ಹೊಸವರ್ಷದ ಗುಪ್ತಸಂಕಲ್ಪ ಆಗಿರಬೌದು’ ಎಂದೆ.
‘ವಿಶ್ವದ ಉಸಾಬರಿ ನಮಗ್ಯಾಕೆ ಬಿಡು... ನಮ್ಮ ಮಂದಿ ಸಂಕಲ್ಪ ಮಾಡೂದ್ರಾಗೆ ಏನು ಕಡಿಮಿ?’ ಎಂದಿತು ಬೆಕ್ಕಣ್ಣ.
‘ಭ್ರಷ್ಟಾಚಾರಿಗಳ ಧನಕನಕ ಸಂಕಲ್ಪ, ರಾಜಕಾರಣಿಗಳ ಕುರ್ಚಿ ಸಂಕಲ್ಪ... ಅದಾನಿ, ಅಂಬಾನಿಯಂತಹ ಕಾರ್ಪೊರೇಟ್ ಕುಳಗಳ ಸರ್ವಂಸ್ವಾಹಾ ಸಂಕಲ್ಪ, ತಂದೆತಾಯಂದಿರು, ಖಾಪ್ ಪಂಚಾಯಿತಿಗಳಿಗೆ ಮರ್ಯಾದೆಗೇಡು ಹತ್ಯೆ ಮಾಡುವ ಸಂಕಲ್ಪ...’ ನಾನು ಪಟ್ಟಿ ಹೇಳುತ್ತ ಹೋದೆ.
‘ಕೊನೇಪಕ್ಷ ತಂದೆ–ತಾಯಂದಿರು ಮನುಷ್ಯರಾಗೋ ಸಂಕಲ್ಪ ಮಾಡಿದರೆ ಸ್ವಂತಮಕ್ಕಳ ಮರ್ಯಾದೆಗೇಡು ಹತ್ಯೆ ತಪ್ಪತೈತಿ. ನೀವು ಮೊದಲು ಮನುಷ್ಯರಾಗುವ ಮನುಷ್ಯತ್ವದ ಸಂಕಲ್ಪ ಮಾಡಿರಿ!’ ಎಂದು ಬೆಕ್ಕಣ್ಣ ಗುರುಗುಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.