ಚುರುಮುರಿ
‘ಏನ್ರಲೆ, ನಮ್ ನಿರ್ಮಲಕ್ಕನ ಬಜೆಟ್ ಏನಂತತಿ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.
‘ಅದಾ... ಕರ್ನಾಟಕದ ಪಾಲಿಗೆ ನಿರ್ಮಾ ಸೋಪ್ ಹಾಕಿ ಸ್ವಚ್ ತೊಳೆದಂಗೆ ಅನುಸ್ತತಿ’ ಗುಡ್ಡೆ ನಕ್ಕ.
‘ನೀನೇನಂತಿ ಮಂಜಮ್ಮ?’
‘ನಂಗಂತೂ ಖುಷಿಯಾಗೇತಪ, ಚಿನ್ನದ ರೇಟು ಕಮ್ಮಿಯಾತಲ್ಲ’.
‘ಏನ್ ಭಾರೀ ಚಿನ್ನ ಖರೀದಿ ಮಾಡೋಳು ನೀನು’.
‘ಲೇ ಗುಡ್ಡೆ, ನಾನು ಖರೀದಿ ಮಾಡದಿದ್ರೇನು, ನಮ್ ಹೆಣ್ಮಕ್ಕಳಿಗೆ ಅದ್ರಿಂದ ಎಷ್ಟೋ ಸಮಾಧಾನ ಗೊತ್ತಾ?’
‘ತಡೀರಿ, ಒಟ್ಟಾರೆ ಬಜೆಟ್ ಹೆಂಗೈತಿ ನೀ ಹೇಳೋ ದುಬ್ಬೀರ’ ತೆಪರೇಸಿ ಕೇಳಿದ.
‘ನೋಡ್ರಲೆ, ಬಡವರಿಗೆ ಸಬ್ಸಿಡಿ, ಶ್ರೀಮಂತರಿಗೆ ರಿಯಾಯ್ತಿ, ಐ ಮೀನ್ ರಿಬೇಟ್ಟು, ಮಧ್ಯಮ ವರ್ಗಕ್ಕೆ ಬಕೆಟ್ಟು, ಅಷ್ಟೇ ಈ ಬಜೆಟ್ಟು’ ದುಬ್ಬೀರ ತಿಪ್ಪೆ ಸಾರಿಸಿದ.
ಅಪರೂಪಕ್ಕೆ ಹರಟೆಕಟ್ಟೆಗೆ ಬಂದಿದ್ದ ಗೌಸು ‘ಅಲ್ಲ ದುಬ್ಬೀರ್ ಭಾಯ್, ಈ ಫೈನಾನ್ಸ್ದು ಮಿನಿಸ್ಟರ್ ಐತಲ್ಲ, ಕರ್ನಾಟಕದ್ದು ಮೆಂಬರ್ ತಾನೆ? ಮತ್ತೆ ನಮ್ಗೇ ದೋಖಾ ಯಾಕೆ?’ ಎಂದ.
‘ಅದು ಷಡ್ಯಂತ್ರ ಕಣೋ ಗೌಸು’.
‘ಷಡ್ಯಂತ್ರ ಅಂದ್ರೆ?’
‘ಶೆಡ್ನಲ್ಲಿ ನಡೆಯೋ ತಂತ್ರಕ್ಕೆ ಷಡ್ಯಂತ್ರ ಅಂತಾರೆ ಕಣಲೆ, ಇವನೊಬ್ಬ...’ ಗುಡ್ಡೆ ಕಿಸಕ್ಕೆಂದ.
‘ಲೇಯ್, ಪಾಪ ಗೌಸ್ಗೆ ಗೊತ್ತಾಗಲ್ಲ ಅಂತ ಏನೇನರೆ ಹೇಳ್ತೀಯ ಮೂಢ’.
‘ನೀನು ಮೂಡ ಗೀಡ ಅಂದ್ರೆ ಹೆದ್ರಿಕಿ ಆಗ್ತತಪ, ಮೊದ್ಲೇ ತನಿಖಿ ಬೇರೆ ಶುರುವಾಗೇತಿ’.
‘ಥೋ... ಈ ಗುಡ್ಡೆ ಎಲ್ಲೆಲ್ಲಿಗೋ ಹೋಗ್ತಾನಪ. ಈಗ ಬಜೆಟ್ ಪ್ರಕಾರ, ನಾವು ನೂರು ರೂಪಾಯಿ ಖರ್ಚು ಮಾಡಿದ್ರೆ 63 ರೂಪಾಯಿ ಟ್ಯಾಕ್ಸ್ಗೇ ಹೋಗ್ತತಂತೆ, ಸೆಂಟ್ರಲ್ಗೆ ಈ ಟ್ಯಾಕ್ಸ್ ಕೊಡದಂಗೆ ಏನರೆ ಮಾಡ್ಬೇಕಲ್ಲ?’ ತೆಪರೇಸಿ ಕೇಳಿದ.
ತಕ್ಷಣ ಗೌಸು ‘ಅರೆ ಇಸ್ಕಿ, ಖರ್ಚು ಮಾಡಿದ್ರೆ ಟ್ಯಾಕ್ಸ್ಗೆ ಹೋಗ್ತತಿ, ಖರ್ಚೇ ಮಾಡದಿದ್ರೆ?’ ಎಂದ.
‘ಅಬಾಬಬ, ಲೇ ಗೌಸು ನಿಂಗೂ ತೆಲಿ ಐತಿ ಬಿಡಲೆ’ ಎಂದ ಗುಡ್ಡೆ. ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.